Tuesday, December 7, 2010

ಉಪವಾಸ ಹಾಕಿದ್ರೆ!

ಹಳ್ಳಿಯಲ್ಲಿರುವ  ನನ್ನ ಸ್ನೇಹಿತೆಯ ಮಗಳು ತನುಜಾ ಬೆಂಗಳೂರೆಂಬ ಈ ಮಹಾನಗರಿಯಲ್ಲಿ  ಒಬ್ಬ  ಸಾಪ್ಟವೇರ್  ಇಂಜೀನಿಯರ್.  ನನ್ನ ಸ್ನೇಹಿತೆ ಫೋನ್ ಮಾಡಿದಾಗಲೆಲ್ಲ ಹೇಳೋವ್ಳು.'' ನಿನ್ನ ನದ್ರಿಗೆ ಯಾವುದಾದ್ರು ಒಳ್ಳೆ ಹುಡುಗ ಬಿದ್ರೆ ನಮ್ಮನೆ ತನುಜಾ  ನಿನ್ನ ಲಕ್ಷ್ಯದಲ್ಲಿರಲೆ ಮಹರಾಯ್ತಿ''  ಎಂದು.  ಸಹಜವಾಗಿ ನನ್ನ ಸ್ವಭಾವವೂ ಅದೇ.ಯಾವುದಾದ್ರು ಹುಡುಗ ಹುಡುಗಿಯರು ನನ್ನ ಕಣ್ಣೆದುರಿಗೆ ಸುಳದ್ರೆ "ಇವರಿಬ್ಬರದು ಒಳ್ಳೆ ಪೇರ್ ಆಗಬಹುದಿತ್ತೇನೋ"  ಅಂತ ನನ್ನ ಮನಸ್ಸು ಲೆಖ್ಖ ಹಾಕಲು ಶುರು ಮಾಡುತ್ತದೆ. ಅಂತಾದ್ರಲ್ಲಿ  ನನ್ನ  ಆಪ್ತ ಸ್ನೇಹಿತೆಯ ಕೊರಗು ನನ್ನ ತಟ್ಟದೆ ಇರಲು ಸಾಧ್ಯಾನಾ? ಆದ್ರೆ ತೆಳ್ಳಗೆ ಬೆಳ್ಳಗೆ ಇರೋ ಈ ಹುಡುಗಿಗೆ,  ಸರಿ  ಹೊಂದುವಂತ   ಒಬ್ಬ ಹುಡುಗನೂ ನನ್ನ ಕಣ್ಣಿಗೆ ಬಿದ್ದಿರಲಿಲ್ಲ.

ಅಕಸ್ಮಾತ್ತಾಗಿ ಈಗೊಂದು ವಾರದ ಹಿಂದೆ  ನಮ್ಮ ಪರಿಚಯದ ಹುಡುಗನೊಬ್ಬ ಯಾವುದೋ ಕೆಲಸದ ಮೇಲೆ ನಮ್ಮ ಮನೆಗೆ ಎರಡು ದಿನದ ಮಟ್ಟಿಗೆ  ಬಂದಿದ್ದ.  ಅವನು ಬಂದ  ಮೊದಲ ದಿನ ಯಾವ ಹುಡುಗಿಯರೂ ನನ್ನ ಮನಸಿನೆದುರಿಗೆ   ಬರಲಿಲ್ಲ.  ಆದರೆ ಮರುದಿವಸ ಆ ಹುಡುಗನ  ನಡತೆ ನೋಡುತ್ತಿದ್ದಂತೆ  ಒಂದು ಮನಸ್ಸು...... ತನುಜಾಂಗೆ  ಈ  ಹುಡುಗ  ಆದ್ರೂ  ಆಗಬಹುದಿತ್ತು. ಹುಡುಗನ ರೂಪಕ್ಕಿಂತ ಗುಣ ಮುಖ್ಯವಲ್ವೆ ಏನು ಮಾಡೋದು?  ಏನು ಮಾಡೋದು?  ಅಂತ  ನನ್ನ  ಮನಸ್ಸು ನನ್ನನ್ನೇ  ಒಪ್ಪಿಸಲು ಶತ ಪ್ರಯತ್ನ ಮಾಡಿತ್ತು. ಆದ್ರೆ  ತನುಜಾ '' ಅಯ್ಯೋ ಆಂಟಿ ಇವನೂ ಮದುವೆ ಗಂಡಾ?" ಅಂತ ಕೇಳಿಬಿಟ್ರೆ ಅಂತಾನೂ ಭಯವಾಯ್ತು .  ಆದ್ರೂ  ಧೈರ್ಯ ಮಾಡಿ ತನುಜಾಂಗೆ ನಮ್ಮ ಮನೆಗೆ  ಬರಲು ಹೇಳಿಬಿಟ್ಟೆ.  ಮತ್ತೆ ಸಾಧ್ಯವಾದಷ್ಟೂ ಆ ಹುಡುಗನ ರೂಪ ಸ್ವಭಾವಗಳನ್ನೆಲ್ಲ  ಫೋನಲ್ಲೇ ಅವಳಿಗೆ ವಿವರಿಸಿದೆ.

ಸರಿ, ತನುಜಾ ನಮ್ಮನೆಗೆ ಬಂದ್ಲು. ನನಗೋ ಎದೆಯಲ್ಲಿ ಢವ ಢವಾ.  ಪಾಪ ಆ ಹುಡುಗನಿಗೆ ನಾನು ಏನೂ ಹೇಳಿರಲಿಲ್ಲ. ಸ್ವಲ್ಪ ಹೊತ್ತು ನಾವು ಮೂವರೂ ಲೋಕಾಭಿರಾಮವಾಗಿ  ಮಾತಾಡಿದೆವು.  ನಾನು ಟೀ ಮಾಡಲು ಒಳಗೆ ಬಂದೆ.  ತನುಜಾನೂ ನನ್ನ ಹಿಂಬಾಲಿಸಿದಳು.  "ಸಾರೀ....... ತನುಜಾ,  ಹುಡುಗ ಒಳ್ಳೆಯವನು ಆದ್ರೆ  ಏನ್ ಮಾಡ್ತೀಯಾ, ..... ...  ನಿನ್ನ ಅಮ್ಮಂಗೆ  ಹೇಳಿದ್ರಂತೂ ಈಗ್ಲೇ  ನನಗೆ  ಒಂದು ಗತಿ  ಕಾಣಿಸಿ ಬಿಡ್ತಾಳೆನೊ  ಅಲ್ವನೆ"  ಅಂದೆ.  ಅದಕ್ಕೆ ಅವಳು "ಅಯ್ಯೋ  ಬಿಡಿ ಆಂಟಿ, ಹುಡುಗನ  ನೋಡಿದ್ರೆ  ಮತ್ತೆಲ್ಲಾ ಓಕೆ ಅನಿಸ್ತಾನೆ.   ಇನ್ನು  ದಪ್ಪಾನಾ......ನಾಲ್ಕು ದಿವಸ  ಉಪವಾಸ ಹಾಕಿದ್ರೆ ಎಲ್ಲಾ ಸರಿ  ಆಗ್ತಾನೆ.  ಅದಕ್ಯಾಕೆ  ಯೋಚನೆ ಮಾಡ್ತೀರಾ?"  ಎಂದು ಹೇಳಿದಾಗ ಒಂದು ಕ್ಷಣ  ನಾನು    ತಬ್ಬಿಬ್ಬುಗೊಂಡೆ. ಆದರೆ   ಅವಳ ಧನಾತ್ಮಕ  ಪ್ರತಿಕ್ರಿಯೆ ನನಗೆ  ತುಂಬಾ ತುಂಬಾ ಖುಷಿ  ಕೊಟ್ಟಿತು.