Saturday, July 10, 2010

ಆಯೀ

ಆಯೀ,
ನಿನಗೆ ಪತ್ರಿಸಬೇಕು
ಅನ್ನೋ ನನ್ನ ಸಿದ್ಧತೆಗೇ
ಎಷ್ಟೊಂದು ಹಗಲು ರಾತ್ರಿಗಳಾದವು,
ರಾತ್ರಿಗಳು  ಹಗಲಾದವು.
Sorry, ಆಯೀ.

"ನನಗೀಗ ನಿದ್ದೆಯ ಹಂಗಿಲ್ಲ,
ಕಿಶೋರನ ನೆನಪಿದೆಯಲ್ಲ"
ಎಂದು ಬರೆದಿದ್ದೆಯಲ್ಲ,
ಒಳ್ಳೆ  ಆಯೀ ನೀನು.

ಆಯೀ,
ನಿನ್ನ ಈ ಪುಟ್ಟನಿಗೆ 
ಎಷ್ಟೊಂದು ದಿನದಿಂದ ಕಾಡುತ್ತಿತ್ತು
ಹಾಳಾದ ನೆಗಡಿ ಕೆಮ್ಮು. 
ನನಗೆ ಮರೆತೇ ಹೋಗಿತ್ತು  ನೋಡು 
ನೀನು ಕಟ್ಟಿ ಕೊಟ್ಟ ಹಿಪ್ಪಲಿ ಪುಡಿ, ಜೇನುತುಪ್ಪ. 
ಅದನ್ನು ಹಾಕಿದ ಮೇಲೆಯೇ 
ಕಿಶೋರ ಆರಾಮಾಗಿದ್ದು, 
ಮತ್ತೆ  ಅದನ್ನೇ ಚಿಂತೆ ಮಾಡ್ತಾ ಕೂಡ್ರಬೇಡ. 

ಆಯೀ, 
ಹೇಗಿದೆ ನಿನ್ನ ಬೆನ್ನಿನ ನೋವು
ಎಂದೆಲ್ಲ  ನಾನು ಕೇಳುವುದಿಲ್ಲ ಬಿಡು. 
ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೂ
ಅಡಿಕೆ ಸುಲಿಯುವ ಸಡಗರ ನಿನಗೆ. 
ಅಂಗಳದ ಮೂಲೆ ಮೂಲೆಯಿಂದಲೂ 
ನುಗ್ಗಿ ಬರುವ ಛಳಿಗೂ ನಿನ್ನ ಬೆನ್ನ 
ಸವರುವ  ಧೈರ್ಯವಿಲ್ಲ.  
ಇನ್ನು,  ಆ ನೋವು ನಿನಗ್ಯಾವ ಲೆಖ್ಖ  ಹೇಳು? 

ಮತ್ತೆ ಆಯೀ, 
ಅಪ್ಪನ ಮಂಡಿ ನೋವನ್ನ ನೆನೆಸಿ ನೆನಸಿ 
ಗುಟ್ಟು ಗುಟ್ಟಾಗಿ ಕಣ್ಣೀರು ಸುರಿಸುತ್ತ ಕೂಡ್ರಬೇಡ. 
ಪಾಪ, ಅನಾರೋಗ್ಯದ ಸೈನ್ಯವೇ ಅವನ ಮೇಲೆ ದಾಳಿ ಇಟ್ಟಿದೆ.
ಆದರೂ ಅವನ ಜೀವನ ಪ್ರೀತಿ 
ಉತ್ಸಾಹ ನೋಡು, 
ಅದನ್ನು ನೋಡಿಯಾದರೂ ಖುಷಿಪಡು ಆಯೀ. 

ಆಯೀ,
ಇಂದು ಏನಾಯ್ತು ಗೊತ್ತ?
ಅಡಿಗೆ ಮಾಡುತ್ತಿದ್ದೆ.
ಸಾರಿನ ಪುಡಿಯ ಡಬ್ಬ ತೆಗೆದರೆ 
ಖಾಲಿಯಾದ ಡಬ್ಬ  ನನ್ನ ಮುಖ ನೋಡಿ ನಕ್ಕಿತು.
ನೀ ಮಾಡಿಕೊಟ್ಟ ಹುಳಿಪುಡಿ, ಚಟ್ನಿಪುಡಿ
ಎಲ್ಲಾ ಮುಗಿದದ್ದು ಹಳೆಯ ಮಾತಾಯ್ತು ಬಿಡು.
ಇದನ್ನೆಲ್ಲಾ ಸುಮ್ನೆ ಹೇಳಿದೆ ಆಯೀ
ಮತ್ತೆ ಅದನ್ನೇ ಕನವರಿಸುತ್ತ ಕೂಡ್ರಬೇಡ.


ಆಯೀ,
ಎಷ್ಟೊಂದು ದಿನವಾಗಿತ್ತು 
ಟೆರೇಸಿನ ಮೇಲೆ ಹೆಜ್ಜೆ ಊರದೇ.
ಗಿಡಗಳಿಗೆ ನೀರುಣಿಸುವದೂ
ಈಗೀಗ ನಿಂಗಿಯ ಕೆಲಸವೇ.
ಅಕಸ್ಮಾತ್ ಮೆಣಸಿನ ಕಾಯಿ 
ಒಣಗಿಸಲು ಟೆರೇಸ್ ಮೇಲೆ ಹೋದ ನನಗೆ 
ಅದೆಂಥ ವಿಸ್ಮಯ ಕಾದಿತ್ತು ಗೊತ್ತಾ? 

ನಾ ಬರುವ ದಿನ ಬೇಡ ಬೇಡ 
ಎಂದರೂ ಕೇಳದೇ ಚೀಲದ ಸಂದಿಯಲ್ಲಿ 
ತುರುಕಿದ್ದೆಯಲ್ಲ ಆ ಬಿಳೆ, ಕೆಂಪು, ಹಳದಿ 
ಸೇವಂತಿಗೆ ಸಸಿಗಳನ್ನ.
ಆ ಪುಟ್ಟ ಪುಟ್ಟ ಗಿಡಗಳೆಲ್ಲ ಬೆಳೆದು 
ಇಂದು ತನ್ನೊಡಲ ತುಂಬಿ 
ಹೇಗೆ ಅರಳಿ ನಿಂತಿವೆ ಗೊತ್ತಾ, ಆಯೀ.