Thursday, March 15, 2012

ಮಾತು, ಮಾತು, ಮಾತು.....


ಒಂದೊಂದು ಸಲ   ಸಲ ನಾನೊಬ್ಬಳೇ ಮಾತಾಡುತ್ತಿದ್ದೆ.  ಆಗ ನನ್ನ  ಮಾತುಗಳನ್ನು ಅವನು ತನ್ನ ಕಣ್ಣುಗಳಲ್ಲಿ ತುಂಬಿ ಕೊಳ್ಳುತ್ತಿದ್ದ.  ಇನ್ನು ಬಹಳಷ್ಟು ಸಲ  ಅವನು  ಯಾವುದ್ಯಾವುದೋ  ವಿಷಯದ ಮೇಲೆ ಬಹಳ ಗಂಭೀರವಾಗಿ  ಮಾತನಾಡುತ್ತಿದ್ದ. ಅದರಲ್ಲಿ ಬಹಳಷ್ಟು ವಿಷಯಗಳು  ನನ್ನ ತಲೆಯ ಮೇಲಿಂದಲೇ  ಹಾದು  ಹೋಗುತ್ತಿದ್ದವು.  ಆಗ ನಾನು ಅವನ ಮುಖವನ್ನಷ್ಟೇ   ನೋಡುತ್ತ  ಕುಳಿತು ಬಿಡುತ್ತಿದ್ದೆ. ಅದು ಬಹುಶಃ ಅವನಿಗೂ ಗೊತ್ತಾಗುತ್ತಿತ್ತೋ  ಏನೋ......    ಬಹಳ  ಸಲ  ಅವನ ಪಾಂಡಿತ್ಯ ನನ್ನಲ್ಲಿ ಬೆರಗನ್ನು ಹುಟ್ಟಿಸುತ್ತಿದ್ದವು. ಇನ್ನೂ  ಬಹಳ  ಸಲ ಅವನ ಮಾತುಗಳು ನನಗೆ ಬಿಡಿಸಲಾರದ ಪ್ರಶ್ನೆಯಾಗಿ ಬಿಡುತ್ತಿದ್ದವು. ಕೆಲವೊಂದು   ಸಲವಂತೂ   ಅವನ ಮಾತುಗಳು ನನ್ನ ಕರ್ಣ ಪಟಲವನ್ನು ದಾಟಿ, ಅವು   ಭಾವ ತಂತುಗಳ ವರೆಗೂ ಮುಟ್ಟಿ ಅಲ್ಲಿ ಸೂಕ್ಷ್ಮ ತರಂಗ ಗಳನ್ನೇ   ಉಂಟುಮಾಡುತ್ತಿದ್ದವು. ಹೀಗೆ ಅವನ ಮಾತಿಗೆ ಒಮ್ಮೆ  ಆಶ್ಚರ್ಯ ಪಡುತ್ತ,   ಬೆರಗಾಗುತ್ತ,  ಮತ್ತೊಮ್ಮೆಅವನ ಮಾತು ನನಗೆ    ಪ್ರಶ್ನೆಯಾಗುತ್ತ  ಮಗದೊಮ್ಮೆ ಉತ್ತರವಾಗುತ್ತ  ಎಷ್ಟೋ ಸಲ   ಅವನ ಮಾತಿಗೆ ನಾನೇ  ಭಾವವಾಗುತ್ತಾ   ನನ್ನ ಮುಗ್ಧ  ಪ್ರಪಂಚ ವಿಸ್ತಾರ ವಾಗಿಬೆಳೆದಿತ್ತು. ಅಭ್ಭಾ ಆಗಲೇ ಅದೆಂಥಾ ಅದ್ಭುತ ಜಗತ್ತನ್ನು ಅವನು ತನ್ನ ಸುತ್ತ ನಿರ್ಮಿಸಿಕೊಂಡಿದ್ದ .ದಿನಗಳು ಋತುಗಳು ಕಳೆದಂತೆ ಅವನ ವೈಚಾರಿಕ ಪ್ರಖರತೆ     ಇನ್ನೂ ಇನ್ನೂ ಬೆಳಗುತ್ತಾ  ಇತ್ತು   ಅಂತಲೇ  ನನ್ನ ಭಾವನೆ......................

ಪಠಯ್     ಪಾಠಗಳಿಂದ  ಹೊರ ಇಣುಕಿ ಸುತ್ತ  ದೃಷ್ಟಿ ಹಾಯಿಸಿದಾಗ    ಗೋಚರಿಸಿದ್ದು  ' ಚಂದ ಮಾಮಾ' .  ಆಗ  ಅದೇ ಒಂದು ದೊಡ್ಡ ಜಗತ್ತು. ಅಲ್ಲಿಯೇ  ಅದೆಷ್ಟೋ ವಸಂತಗಳು. ಅಲ್ಲಿಂದ ಮುಂದು  ಹೋಗಲಿಕ್ಕೇ   ಗೊತ್ತಾಗದ ಆ ಕಾಲ. ಅಲ್ಲಿಂದ ಮುಂದೆ  ಸರಿದದ್ದು  ಯಾವಾಗ?   ಕ್ಲಾಸಲ್ಲಿ ಪಾಠ ನಡೆಯುತ್ತಿದ್ದ ಸಮಯ, ಸ್ನೇಹಿತೆಯ ಪಟ್ಯ ಪುಸ್ತಕದಿಂದ ಜಾರಿಬಿದ್ದ  ಪ್ರೇಮಭರಿತ  ಕಾದಂಬರಿ. ಆಮೇಲೆ ಅದೆಷ್ಟೋ ವರ್ಷಗಳವರೆಗೂ  ಮನಸ್ಸನ್ನ  ಕಟ್ಟಿ ಹಾಕುವ  ಅದೇ ದಾರಿಯ  ಪಯಣ.  ನಾಯಕ ಧರಿಸಿದ  ತುಂಬು ತೋಳಿನ ಶರ್ಟು.  ನಾಯಕಿಗೊಪ್ಪುವ  ತಿಳಿ  ಬಣ್ಣದ ರೇಷ್ಮೆ ಸೀರೆ ,ಅವಳು ಮುಡಿದ ಕನಕಾಂಬರ, ಮಲ್ಲಿಗೆ ಮಾಲೆ.  ಪ್ರೀತಿ ಪ್ರಣಯ  ಇಂಥಹ  ಸಾಹಿತ್ಯದ್ದೇ ದರ್ಬಾರು. ಸಾಹಿತ್ಯ ವೆಂದರೆ  ಇವಿಷ್ಟೇ ಎಂಬ ತಿಳುವಳಿಕೆ. ಆ ಕಾಲಘಟ್ಟದಲ್ಲೇ  ಅವನ ಮಾತುಗಳು ನನ್ನ ಸೆಳೆದದ್ದು. ಆಗ ಅಲ್ಲಿ  ಅವನ ಮಾತಿಗೆ ಸೆಳೆತ ಮಾತ್ರ ವಿರಲ್ಲಿಲ್ಲ . ಅಲ್ಲಿ ಎಷ್ಟು ಗೊಂದಲವಿತ್ತು  ಅಂದರೆ,  ಮೊದಮೊದಲು  ಅವನ ಮಾತುಗಳು  ಅರ್ಥವೇ ಆಗುತ್ತಿರಲಿಲ್ಲ. ಇದು ಬದುಕ? ಇದು ಸಾಹಿತ್ಯವಾ? ಸಾಹಿತ್ಯ ಬದುಕು ಒಂದೇನಾ? ಅಥವಾ ಬೇರೆ ಬೇರೆನಾ? ಸಾಹಿತ್ಯದೊಳಗೆ ಬದುಕಾ?  ಬದುಕಿನೊಳಗೆ ಸಾಹಿತ್ಯವಾ? ಏನೇನೆಲ್ಲಾ ಪ್ರಶ್ನೆಗಳನ್ನು  ಮನದಲ್ಲಿ  ತುಂಬಿಕೊಂಡು  ಅವನ ಮುಖವನ್ನೇ ದಿಟ್ಟಿಸುತ್ತಿದ್ದೆ. ಆಗ  ಅವನ ಮಾತುಗಳು  ಎಷ್ಟು  ಅರ್ಥ ವಾಗುತ್ತಿತ್ತೋ ಬಿಡುತ್ತಿತ್ತೋ  ಆದರೆ ಈ ವಿಸ್ತಾರವಾದ ಹೊಸಪ್ರಪಂಚಕ್ಕೆ ಧುಮುಕುವ ಅದಮ್ಯ ಆಸೆ .   ದಿನಕ್ಕೊಂದು ವಿಚಾರ, ದಿನಕ್ಕೊಂದು ವಿಶ್ಲೇಷಣೆ. ಜೀವನದ ಎಲ್ಲಾ ಮಗ್ಗಲುಗಳನ್ನೂ ತಡಕಿ ತಡಕಿ ಬಗೆದು ಬಗೆದು ಅದರ ಆಳ ಅಗಲಗಳನ್ನು  ಒರೆಗೆ ಹಚ್ಚುವ ಅವನ ಮಾತುಗಳು  ಅಂದರೆ  ಏನೋ ಹೊಸತನ್ನು ಪಡೆದ ಸಂಭ್ರಮ. ಆ ಮಾತು ಕಥೆಗಳ ನಡುವೆಯೇ   ನುಸುಳುವ  ಒಂದೊಂದು ಮುಗ್ಧ  ಪ್ರಶ್ನೆ . ಅಂಥ  ಬಾಲಿಶ ಮಾತುಗಳು ಅವನಿಗೆ ನಗು ತರಿಸುತ್ತಿತ್ತಾ?    ಈಗಲೂ  ನೆನಪಿದೆ. ಒಂದುದಿನ  ಅವನು ಓಶೋನ   ದೃಷ್ಟಿಯಲ್ಲಿ ಆಸೆ, ಬದುಕು ಅದರ ಬಗ್ಗೆ  ಬಹಳ  ಆಳವಾಗಿ ಮಾತನಾಡುತ್ತಿದ್ದ.   ಅದು ನನಗೆ  ಕಬ್ಬಿಣದ ಕಡಲೆ ಅಂತ  ಅನಿಸಿರಬೇಕು.  ಥಟ್ಟನೆ ಹೇಳಿದೆ  ಈ ವಿಷಯದಲ್ಲಿ  ಬುಧ್ಧನ ವಿಚಾರಗಳೇ ಹೆಚ್ಚು ಪ್ರಿಯ. ಬುಧ್ಧ  ಎಷ್ಟು ಸರಳವಾಗಿ ಹೇಳಿದ್ದಾನೆ ಆಸೆಯೇ ದುಃಖಕ್ಕೆ ಕಾರಣ  ಎಂದು. ಬುಧ್ಧನ ವಿಚಾರದಲ್ಲಿ ಬದುಕನ್ನ ಫಾಲೋ ಮಾಡಿದರೆ  ಬದುಕು ಎಷ್ಟು ಸುಂದರ ಅಲ್ವೇ.....  ಆಗ ಥಟ್ಟನೆ ಅವನ  ಉತ್ತರ ಬಂತು. ಆಸೆ, ಬದುಕು ಎನ್ನುವದೆಲ್ಲ  ಬುಧ್ಧ ಹೇಳಿದಷ್ಟು ಸರಳವಾಗಿದ್ದಿದ್ದರೆ ........ ..............

ಕಾಲ ಸರಿದು ಬೆಳಗು ಹಗಲಾಗುವ  ಸಮಯ.  ಮುಗ್ಧ ಭಾವಕ್ಕೆ ಪ್ರೌಢತೆಯ ಮೆರಗು.  ಬದುಕಿಗೆ ತನ್ನದೇ ಒಂದು ಪರಿಧಿಯನ್ನು  ಕಟ್ಟಿಕೊಳ್ಳುವ  ಸಂದರ್ಭ  ಮತ್ತು  ಸಂಭ್ರಮ .

ಅವನು ಹರವಿಟ್ಟ ಮಾತುಗಳು   ಪುಟ್ಟ ಬೊಗಸೆಗಳಲ್ಲಿ  ಎಷ್ಟು ಸೋರಿ ಹೊಗಿತ್ತೋ  ಎಷ್ಟು ಉಳಿದುಕೊಂಡಿತ್ತೋ ....... ಉಳಿದುಕೊಂಡ ಮಾತುಗಳೆಲ್ಲಾ  ಮುತ್ತುಗಳೇ  ಎಂಬ   ಭಾವ.

 ಕೆಲವೊಮ್ಮೆ  ಬದುಕಿನ  ತಿರುವಿನಲ್ಲೆಲ್ಲೋ   ಚಲಿಸುವ  ಹೆಜ್ಜೆ ಒಂದು ಕ್ಷಣ ನಿಂತು ಬಿಟ್ಟಿದೆಯೇನೋ   ಎಂದು ಗಾಬರಿಯಾದಾಗ    ಅವನಾಡಿದ   ಮಾತುಗಳ  ಮಿಂಚು.

ಮದ್ಯಾಹ್ನದ ಬಿಸಿಲಿಗೆ ಪ್ರಖರತೆ ಹೆಚ್ಚು. ಆ ಪ್ರಕಾಶಕ್ಕೆ ಎಷ್ಟೊಂದು  ಹೊಳಪು.  ಆದರೆ ಬಿಸಿ ಇಳಿದು  ಸಂಜೆಯ ತಂಪು ಆವರಿಸುತ್ತಿದ್ದಂತೆ  ಅಲ್ಲಿ  ಪ್ರಕಾಶವೂ ಕಡಿಮೆ. ಹೊಳಪೂ  ಕಡಿಮೆ.

ಇಂಥದ್ದೇ  ಒಂದು ಥಣ್ಣನೆಯ ಸಂಜೆಯಲಿ ಮತ್ತೆ  ಅದೇ   ಅವನೆದುರಿಗೇ  ಕುಳಿತು  ಅವನ ಮಾತುಗಳನ್ನ  ಕೇಳಿಸಿ ಕೊಳ್ಳುವ   ಆಕಸ್ಮಿಕ   ಸಂದರ್ಭ.   ಅಲ್ಲಿ ಅವನಿಂದ  ಅದೇ.........   ಮಾತುಗಳು  ......     ಭೂತ  ಭವಿಷ್ಯಗಳನ್ನು ವೈಚಾರಿಕ   ದ್ರವದೊಳಗೆ  ಅದ್ದಿ  ಅದ್ದಿ  ಮುಳುಗಿಸಿ    ಅದನ್ನು ಜೋಪಾನವಾಗಿ  ಎತ್ತಿಡುವ  ಅವನ  ಮಾತುಗಳು.   ಸಮಯದ  ಪರಿವೇ  ಇಲ್ಲದ  ಅವನ  ಮಾತುಗಳು.    ಆದರೆ  ಈ ಸಲ  ಯಾಕೋ  ಅವನ  ಮಾತುಗಳ ಬಗ್ಗೆ  ಬೆರಗಾಗಲಿ    ಆಶ್ಚರ್ಯವಾಗಲಿ  ಪ್ರಶ್ನೆಗಳಾಗಲಿ   ನನ್ನಲ್ಲಿ   ಹುಟ್ಟಲೇ  ಇಲ್ಲಾ.  ಯಾಕೋ    ನನ್ನೊಳಗೆಲ್ಲ   ಬರೇ ಮೌನವೇ.   ಅವನಿಗೇ   ಬೆರಗಾಗಿರಬೇಕು   ಕೇಳಿದ .  ಎಲ್ಲಿ ನಿನ್ನ ಮಾತುಗಳೆಲ್ಲಾ   ಎಲ್ಲಿ ಹೋದವು ?.............. ....ಅವನ ಪ್ರಶ್ನೆಗೂ  ಉತ್ತರಿಸಬೇಕು  ಅಂತ  ಅನ್ನಿಸಲಿಲ್ಲ  .  ಆದರೆ  ಮನಸ್ಸು  ತನ್ನಷ್ಟಕ್ಕೇ  ಕೇಳಿಕೊಂಡಿತು.  ಬದುಕಿಗೆಷ್ಟು ಮಾತು  ಬೇಕು ?   "ಭೂತವಂತೂ ಕಣ್ಮುಚ್ಚಿ ಮಲಗಿರುತ್ತದೆ. .   ಭವಿಷ್ಯ ಕಣ್ ತೆರೆದೇ  ಇರುವದಿಲ್ಲ ., ಇನ್ನು ವರ್ತಮಾನಕ್ಕೆಷ್ಟು   ಮಾತುಗಳು????

Wednesday, March 7, 2012

ದಾರಿ .........

ಎಷ್ಟು ದೊಡ್ಡ ದೊಡ್ಡ  ರಸ್ತೆಗಳು  ಅಕ್ಕ ಪಕ್ಕ ಮರಗಿಡಗಳು.
ತಂಪಾದ ಗಾಳಿ, ಒಮ್ಮೊಮ್ಮೆ ಹಿತವಾದ  ಬಿಸಿಲು.
ಕೆಲವೊಮ್ಮೆ  ಉರಿ ಬಿಸಿಲೂ. ಮಳೆ ಗಾಳಿಯೂ.

ಮಧ್ಯದಲ್ಲಿ   ಅಲ್ಲಲ್ಲಿ   ತಗ್ಗು,  ಹೊಂಡ,  ದಿನ್ನೆಗಳು.
ಇದು ಕಾಲು ದಾರಿಯೇನೋ ಅನ್ನುವ ಭಾವ.
ನಡೆದದ್ದು  ಅದೆಷ್ಟು  ದೂರವೋ..........................

ಮೈಲಿಗಲ್ಲೇ  ಇಲ್ಲದ ರಸ್ತೆ.
ಕಾಲಿನ ಕಸುವೇ  ಹೇಳ ಬೇಕು.
ನಡೆದ ದಾರಿ  ಎಷ್ಟು?  ನಡೆವ  ದೂರ  ಎಷ್ಟು ಎಂದು?

ಅಲ್ಲಲ್ಲಿ ಸಿಕ್ಕವರದ್ದೇ  ಜೊತೆ.
ಬಿಟ್ಟರೆ ಒಂಟಿ  ಪಯಣವೇ.
ಯಾರನ್ನೋ  ಸಿಕ್ಕವರ ಕೇಳಿದರೆ ಮುಂದೇನುಂಟು?

ಹೇಳುತ್ತಾರೆ  ಅವರವರ  ಅನುಭವ.
ಮುಂದೆ  ಸಿಗುವುದೇ  ದೊಡ್ಡ  ಬಯಲು.  ಅಲ್ಲಲ್ಲ  ಆಲಯ.
ಕೆಲವರು ಹೇಳುತ್ತಾರೆ.  ಈ ರಸ್ತೆಯೇ  ತುದಿ. ಮುಂದೆ   ಶೂನ್ಯ.......

ಯಾರಿಗೆ  ಗೊತ್ತು, ಮುಂದೇನುಂಟು ಮುಂದೇನಿಲ್ಲಾ  ಎಂದು
ನಾವೇ ನಡೆಯ ಬೇಕು. ನಾವೇ  ನೋಡ ಬೇಕು.
ನಾವೇ  ಸಾಯ ಬೇಕು  ಸ್ವರ್ಗ ಕಾಣಬೇಕು.