Tuesday, December 7, 2010

ಉಪವಾಸ ಹಾಕಿದ್ರೆ!

ಹಳ್ಳಿಯಲ್ಲಿರುವ  ನನ್ನ ಸ್ನೇಹಿತೆಯ ಮಗಳು ತನುಜಾ ಬೆಂಗಳೂರೆಂಬ ಈ ಮಹಾನಗರಿಯಲ್ಲಿ  ಒಬ್ಬ  ಸಾಪ್ಟವೇರ್  ಇಂಜೀನಿಯರ್.  ನನ್ನ ಸ್ನೇಹಿತೆ ಫೋನ್ ಮಾಡಿದಾಗಲೆಲ್ಲ ಹೇಳೋವ್ಳು.'' ನಿನ್ನ ನದ್ರಿಗೆ ಯಾವುದಾದ್ರು ಒಳ್ಳೆ ಹುಡುಗ ಬಿದ್ರೆ ನಮ್ಮನೆ ತನುಜಾ  ನಿನ್ನ ಲಕ್ಷ್ಯದಲ್ಲಿರಲೆ ಮಹರಾಯ್ತಿ''  ಎಂದು.  ಸಹಜವಾಗಿ ನನ್ನ ಸ್ವಭಾವವೂ ಅದೇ.ಯಾವುದಾದ್ರು ಹುಡುಗ ಹುಡುಗಿಯರು ನನ್ನ ಕಣ್ಣೆದುರಿಗೆ ಸುಳದ್ರೆ "ಇವರಿಬ್ಬರದು ಒಳ್ಳೆ ಪೇರ್ ಆಗಬಹುದಿತ್ತೇನೋ"  ಅಂತ ನನ್ನ ಮನಸ್ಸು ಲೆಖ್ಖ ಹಾಕಲು ಶುರು ಮಾಡುತ್ತದೆ. ಅಂತಾದ್ರಲ್ಲಿ  ನನ್ನ  ಆಪ್ತ ಸ್ನೇಹಿತೆಯ ಕೊರಗು ನನ್ನ ತಟ್ಟದೆ ಇರಲು ಸಾಧ್ಯಾನಾ? ಆದ್ರೆ ತೆಳ್ಳಗೆ ಬೆಳ್ಳಗೆ ಇರೋ ಈ ಹುಡುಗಿಗೆ,  ಸರಿ  ಹೊಂದುವಂತ   ಒಬ್ಬ ಹುಡುಗನೂ ನನ್ನ ಕಣ್ಣಿಗೆ ಬಿದ್ದಿರಲಿಲ್ಲ.

ಅಕಸ್ಮಾತ್ತಾಗಿ ಈಗೊಂದು ವಾರದ ಹಿಂದೆ  ನಮ್ಮ ಪರಿಚಯದ ಹುಡುಗನೊಬ್ಬ ಯಾವುದೋ ಕೆಲಸದ ಮೇಲೆ ನಮ್ಮ ಮನೆಗೆ ಎರಡು ದಿನದ ಮಟ್ಟಿಗೆ  ಬಂದಿದ್ದ.  ಅವನು ಬಂದ  ಮೊದಲ ದಿನ ಯಾವ ಹುಡುಗಿಯರೂ ನನ್ನ ಮನಸಿನೆದುರಿಗೆ   ಬರಲಿಲ್ಲ.  ಆದರೆ ಮರುದಿವಸ ಆ ಹುಡುಗನ  ನಡತೆ ನೋಡುತ್ತಿದ್ದಂತೆ  ಒಂದು ಮನಸ್ಸು...... ತನುಜಾಂಗೆ  ಈ  ಹುಡುಗ  ಆದ್ರೂ  ಆಗಬಹುದಿತ್ತು. ಹುಡುಗನ ರೂಪಕ್ಕಿಂತ ಗುಣ ಮುಖ್ಯವಲ್ವೆ ಏನು ಮಾಡೋದು?  ಏನು ಮಾಡೋದು?  ಅಂತ  ನನ್ನ  ಮನಸ್ಸು ನನ್ನನ್ನೇ  ಒಪ್ಪಿಸಲು ಶತ ಪ್ರಯತ್ನ ಮಾಡಿತ್ತು. ಆದ್ರೆ  ತನುಜಾ '' ಅಯ್ಯೋ ಆಂಟಿ ಇವನೂ ಮದುವೆ ಗಂಡಾ?" ಅಂತ ಕೇಳಿಬಿಟ್ರೆ ಅಂತಾನೂ ಭಯವಾಯ್ತು .  ಆದ್ರೂ  ಧೈರ್ಯ ಮಾಡಿ ತನುಜಾಂಗೆ ನಮ್ಮ ಮನೆಗೆ  ಬರಲು ಹೇಳಿಬಿಟ್ಟೆ.  ಮತ್ತೆ ಸಾಧ್ಯವಾದಷ್ಟೂ ಆ ಹುಡುಗನ ರೂಪ ಸ್ವಭಾವಗಳನ್ನೆಲ್ಲ  ಫೋನಲ್ಲೇ ಅವಳಿಗೆ ವಿವರಿಸಿದೆ.

ಸರಿ, ತನುಜಾ ನಮ್ಮನೆಗೆ ಬಂದ್ಲು. ನನಗೋ ಎದೆಯಲ್ಲಿ ಢವ ಢವಾ.  ಪಾಪ ಆ ಹುಡುಗನಿಗೆ ನಾನು ಏನೂ ಹೇಳಿರಲಿಲ್ಲ. ಸ್ವಲ್ಪ ಹೊತ್ತು ನಾವು ಮೂವರೂ ಲೋಕಾಭಿರಾಮವಾಗಿ  ಮಾತಾಡಿದೆವು.  ನಾನು ಟೀ ಮಾಡಲು ಒಳಗೆ ಬಂದೆ.  ತನುಜಾನೂ ನನ್ನ ಹಿಂಬಾಲಿಸಿದಳು.  "ಸಾರೀ....... ತನುಜಾ,  ಹುಡುಗ ಒಳ್ಳೆಯವನು ಆದ್ರೆ  ಏನ್ ಮಾಡ್ತೀಯಾ, ..... ...  ನಿನ್ನ ಅಮ್ಮಂಗೆ  ಹೇಳಿದ್ರಂತೂ ಈಗ್ಲೇ  ನನಗೆ  ಒಂದು ಗತಿ  ಕಾಣಿಸಿ ಬಿಡ್ತಾಳೆನೊ  ಅಲ್ವನೆ"  ಅಂದೆ.  ಅದಕ್ಕೆ ಅವಳು "ಅಯ್ಯೋ  ಬಿಡಿ ಆಂಟಿ, ಹುಡುಗನ  ನೋಡಿದ್ರೆ  ಮತ್ತೆಲ್ಲಾ ಓಕೆ ಅನಿಸ್ತಾನೆ.   ಇನ್ನು  ದಪ್ಪಾನಾ......ನಾಲ್ಕು ದಿವಸ  ಉಪವಾಸ ಹಾಕಿದ್ರೆ ಎಲ್ಲಾ ಸರಿ  ಆಗ್ತಾನೆ.  ಅದಕ್ಯಾಕೆ  ಯೋಚನೆ ಮಾಡ್ತೀರಾ?"  ಎಂದು ಹೇಳಿದಾಗ ಒಂದು ಕ್ಷಣ  ನಾನು    ತಬ್ಬಿಬ್ಬುಗೊಂಡೆ. ಆದರೆ   ಅವಳ ಧನಾತ್ಮಕ  ಪ್ರತಿಕ್ರಿಯೆ ನನಗೆ  ತುಂಬಾ ತುಂಬಾ ಖುಷಿ  ಕೊಟ್ಟಿತು.

Wednesday, September 8, 2010

ಸವಿಗನಸು



ನೀ ಬರುವ ಸಮಯದಲಿ ಮಳೆಯು ಸುರಿಯುತಲಿರಲಿ
ಮಿಂಚಾಗಿ ನಿನ್ನ  ಅಲೆಯು   ನನ್ನ ಸೇರಲಿ

ಮನದ ಅಂಗಳ ತುಂಬಾ ನಿನ್ನ ನೆನಪಿನ  ಬಳ್ಳಿ
ಚಿಗುರಿ ಟಿಸಿಲೊಡೆದು ಮನೆಗೆ ಹಬ್ಬಲಿ

ನಿನ್ನ ಮನದಲಿ ಮೂಡಿದ  ಪ್ರೀತಿಯ  ಮೊಗ್ಗು
ನನ್ನೆದೆಯ ಬನದಲ್ಲಿ  ಹೂವಾಗಿ  ಅರಳಲಿ.

ನೀ ಬರುವ  ದಿಕ್ಕಿನಲಿ  ನಲ್ಮೆಯ ಗಾಳಿಯು ಬೀಸಿ
ನನ್ನೀ  ಬನವೆಲ್ಲಾ ಘಮಘಮಿಸಲಿ.

ನಿನ್ನ  ಗೆಜ್ಜೆಯ ನಾದ ನನ್ನ ಕಿವಿಯಲಿ ಮೊಳಗಿ
ನನ್ನುಸಿರೇ ಗಾನದ ಹೊನಲಾಗಲಿ.

ನಿನ್ನ ಸವಿ ಮಾತುಗಳೆಲ್ಲ ಆಗಸದೆತ್ತರ ಏರಿ
ಅಲ್ಲೇ ಮೋಡಗಳಾಗಿ  ನನ್ನೆಡೆಗೇ  ಸುರಿಯಲಿ.

ನಿನ್ನ  ನೆನಪುಗಳೆಲ್ಲಾ  ಮಳೆಯ ಮುತ್ತುಗಳಾಗಿ
ಈ ಜಗದ ತುಂಬೆಲ್ಲಾ ಹೊಳೆಯಾಗಿ ಹರಿಯಲಿ.

Saturday, July 10, 2010

ಆಯೀ

ಆಯೀ,
ನಿನಗೆ ಪತ್ರಿಸಬೇಕು
ಅನ್ನೋ ನನ್ನ ಸಿದ್ಧತೆಗೇ
ಎಷ್ಟೊಂದು ಹಗಲು ರಾತ್ರಿಗಳಾದವು,
ರಾತ್ರಿಗಳು  ಹಗಲಾದವು.
Sorry, ಆಯೀ.

"ನನಗೀಗ ನಿದ್ದೆಯ ಹಂಗಿಲ್ಲ,
ಕಿಶೋರನ ನೆನಪಿದೆಯಲ್ಲ"
ಎಂದು ಬರೆದಿದ್ದೆಯಲ್ಲ,
ಒಳ್ಳೆ  ಆಯೀ ನೀನು.

ಆಯೀ,
ನಿನ್ನ ಈ ಪುಟ್ಟನಿಗೆ 
ಎಷ್ಟೊಂದು ದಿನದಿಂದ ಕಾಡುತ್ತಿತ್ತು
ಹಾಳಾದ ನೆಗಡಿ ಕೆಮ್ಮು. 
ನನಗೆ ಮರೆತೇ ಹೋಗಿತ್ತು  ನೋಡು 
ನೀನು ಕಟ್ಟಿ ಕೊಟ್ಟ ಹಿಪ್ಪಲಿ ಪುಡಿ, ಜೇನುತುಪ್ಪ. 
ಅದನ್ನು ಹಾಕಿದ ಮೇಲೆಯೇ 
ಕಿಶೋರ ಆರಾಮಾಗಿದ್ದು, 
ಮತ್ತೆ  ಅದನ್ನೇ ಚಿಂತೆ ಮಾಡ್ತಾ ಕೂಡ್ರಬೇಡ. 

ಆಯೀ, 
ಹೇಗಿದೆ ನಿನ್ನ ಬೆನ್ನಿನ ನೋವು
ಎಂದೆಲ್ಲ  ನಾನು ಕೇಳುವುದಿಲ್ಲ ಬಿಡು. 
ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೂ
ಅಡಿಕೆ ಸುಲಿಯುವ ಸಡಗರ ನಿನಗೆ. 
ಅಂಗಳದ ಮೂಲೆ ಮೂಲೆಯಿಂದಲೂ 
ನುಗ್ಗಿ ಬರುವ ಛಳಿಗೂ ನಿನ್ನ ಬೆನ್ನ 
ಸವರುವ  ಧೈರ್ಯವಿಲ್ಲ.  
ಇನ್ನು,  ಆ ನೋವು ನಿನಗ್ಯಾವ ಲೆಖ್ಖ  ಹೇಳು? 

ಮತ್ತೆ ಆಯೀ, 
ಅಪ್ಪನ ಮಂಡಿ ನೋವನ್ನ ನೆನೆಸಿ ನೆನಸಿ 
ಗುಟ್ಟು ಗುಟ್ಟಾಗಿ ಕಣ್ಣೀರು ಸುರಿಸುತ್ತ ಕೂಡ್ರಬೇಡ. 
ಪಾಪ, ಅನಾರೋಗ್ಯದ ಸೈನ್ಯವೇ ಅವನ ಮೇಲೆ ದಾಳಿ ಇಟ್ಟಿದೆ.
ಆದರೂ ಅವನ ಜೀವನ ಪ್ರೀತಿ 
ಉತ್ಸಾಹ ನೋಡು, 
ಅದನ್ನು ನೋಡಿಯಾದರೂ ಖುಷಿಪಡು ಆಯೀ. 

ಆಯೀ,
ಇಂದು ಏನಾಯ್ತು ಗೊತ್ತ?
ಅಡಿಗೆ ಮಾಡುತ್ತಿದ್ದೆ.
ಸಾರಿನ ಪುಡಿಯ ಡಬ್ಬ ತೆಗೆದರೆ 
ಖಾಲಿಯಾದ ಡಬ್ಬ  ನನ್ನ ಮುಖ ನೋಡಿ ನಕ್ಕಿತು.
ನೀ ಮಾಡಿಕೊಟ್ಟ ಹುಳಿಪುಡಿ, ಚಟ್ನಿಪುಡಿ
ಎಲ್ಲಾ ಮುಗಿದದ್ದು ಹಳೆಯ ಮಾತಾಯ್ತು ಬಿಡು.
ಇದನ್ನೆಲ್ಲಾ ಸುಮ್ನೆ ಹೇಳಿದೆ ಆಯೀ
ಮತ್ತೆ ಅದನ್ನೇ ಕನವರಿಸುತ್ತ ಕೂಡ್ರಬೇಡ.


ಆಯೀ,
ಎಷ್ಟೊಂದು ದಿನವಾಗಿತ್ತು 
ಟೆರೇಸಿನ ಮೇಲೆ ಹೆಜ್ಜೆ ಊರದೇ.
ಗಿಡಗಳಿಗೆ ನೀರುಣಿಸುವದೂ
ಈಗೀಗ ನಿಂಗಿಯ ಕೆಲಸವೇ.
ಅಕಸ್ಮಾತ್ ಮೆಣಸಿನ ಕಾಯಿ 
ಒಣಗಿಸಲು ಟೆರೇಸ್ ಮೇಲೆ ಹೋದ ನನಗೆ 
ಅದೆಂಥ ವಿಸ್ಮಯ ಕಾದಿತ್ತು ಗೊತ್ತಾ? 

ನಾ ಬರುವ ದಿನ ಬೇಡ ಬೇಡ 
ಎಂದರೂ ಕೇಳದೇ ಚೀಲದ ಸಂದಿಯಲ್ಲಿ 
ತುರುಕಿದ್ದೆಯಲ್ಲ ಆ ಬಿಳೆ, ಕೆಂಪು, ಹಳದಿ 
ಸೇವಂತಿಗೆ ಸಸಿಗಳನ್ನ.
ಆ ಪುಟ್ಟ ಪುಟ್ಟ ಗಿಡಗಳೆಲ್ಲ ಬೆಳೆದು 
ಇಂದು ತನ್ನೊಡಲ ತುಂಬಿ 
ಹೇಗೆ ಅರಳಿ ನಿಂತಿವೆ ಗೊತ್ತಾ, ಆಯೀ.

Monday, March 8, 2010

ದೂರ ...................................ವಾಣಿ

ಹಲೋ ....................,
ರೀ, ನಾನ್ರೀ........,
......................
ಮಗೂಗೆ  ಹುಶಾರಿಲ್ಲ
..........................
ರಜವೆಲ್ಲಾ  ಮುಗಿದ್ಹೋಗಿದೆ.
................................
ನೀವು ಹಿಂದಿನ ತಿಂಗಳವೇ
ಬರ್ತೀನೆಂದವರು  ಬರಲೇ ಇಲ್ಲಾ
.................................
ಮನೆ ಬಾಡಿಗೆ  ಇನ್ನೂ  ಕಟ್ಟಿಯಾಗಿಲ್ಲಾ
......................................
ಮಾವನವರಿನ್ನೂ  ಆಸ್ಪತ್ರೆಯಲ್ಲೇ  ಇದ್ದಾರೆ.
...................................
ಏನು  ಕೇಳಿಸ್ತಾ ಇದೆಯಾ?
................................
ಅತ್ತೆಯವರ ಔಷಧ  ಮುಗಿದು ಹೋಗಿದೆ.
................................
ಜಲಜಳ ಸೀಮಂತ  ಈ ವಾರವೇ.
...................................
ಅರವಿಂದನ ಫ್ಹೀಸ್ ಕಟ್ಟೋದಿದೆ.
ಇನ್ನೂ ಲೋನೂ ಸಿಕ್ಕಿಲ್ಲಾ.
.................................
ನನಗೂ ಇತ್ತೀಚೆಗೆ
ತುಂಬಾ ತಲೆ ಸುತ್ತುತ್ತಾ ಇದೆ.
ಹಲೋ,  ಕೇಳಿಸ್ತಾ ಇಲ್ವೆ?

ಕೇಳಿಸ್ತಾ ಇದೆ,
ಕ್ರಿಕೆಟ್ ಮ್ಯಾಚ್ ನೋಡ್ತಾ ಇದ್ದೆ.
ನಿನ್ನ ಮಾತು ಮುಗೀತಾ?
ಫೋನ್  ಇಡ್ತೀನಿ.



                                                                                     

Thursday, February 11, 2010

ಮಾತು

ತುಟಿ ಬಿರಿದ ಮಾತುಗಳು
ತುಟಿಯೊಳಗಿನ ಮಾತಾಗುವದಿಲ್ಲ.

ತುಟಿ ಬಿರಿದ ಮಾತುಗಳು
ಕೊರೆದಿಟ್ಟ ಚಿತ್ರದಂತೆ,
ಕಾಣುವ ಕಣ್ಣಿಗೆ
ಸಾವಿರ ಅರ್ಥಗಳು.

ತುಟಿಯೊಳಗಿನ ಮಾತುಗಳು
ಮುಚ್ಚಿಟ್ಟ ಬಾಟಲಿನ ಅತ್ತರದಂತೆ,
ಅದು ಘಮಘಮಿಸುವದಿಲ್ಲ,
ಕಾಲನ ಜೊತೆ ಆವಿಯಾಗಿ ಬಿಡುತ್ತದೆ.

ತುಟಿ ಬಿರಿದ ಮಾತುಗಳು
ಅರಳಿ ನಿಂತ ಮಲ್ಲಿಗೆಯಂತೆ
ನಳನಳಿಸುತ್ತವೆ, ಮತ್ತು
ಬಸವಳಿದು ಬಾಡುತ್ತವೆ.

ತುಟಿಯೊಳಗಿನ ಮಾತುಗಳು
ಚಿಪ್ಪಿನೊಳಗಿನ ಹನಿಯಂತೆ,
ಮುತ್ತೂ ಆಗುತ್ತವೆ,
ಶೂನ್ಯವೂ ಆಗುತ್ತವೆ.

ತುಟಿ ಬಿರಿದ ಮಾತುಗಳು
ರೆಕ್ಕೆ ಬಲಿತ ಹಕ್ಕಿಯಂತೆ,
ಮೇಲಕ್ಕೂ ಹಾರುತ್ತವೆ,
ಕೆಳಕ್ಕೂ ಜಾರುತ್ತವೆ.

ತುಟಿಯೊಳಗಿನ ಮಾತುಗಳು
ಹೆಪ್ಪುಗಟ್ಟಿದ ಹಿಮದಂತೆ,
ತಂಪಾಗಿರುತ್ತವೆ,
ತಣ್ಣಗೆ ಕೊರೆಯುತ್ತವೆ.

ತುಟಿ ಬಿರಿದ ಮಾತುಗಳೆಂದೂ
ತುಟಿಯೊಳಗಿನ ಮಾತಾಗುವದಿಲ್ಲ.

Friday, February 5, 2010

ಪುಟ್ಟಿಯ ಜಗತ್ತು - ೧

ನಮ್ಮ ಮನೆಯ ಜಗುಲಿ ತುಂಬಾ ವಿಶಾಲವಾಗಿದೆ. ಇಡೀ ಕೇರಿಯಲ್ಲೇ  ಇಂಥಾ ಹನ್ನೆರಡಂಕಣದ  ಜಗುಲಿ ಮತ್ಯಾರ ಮನೆಯಲ್ಲೂ ಇಲ್ಲ.  ತಾನು  ಬೆವರು ಸುರಿಸಿ ಇಷ್ಟು ದೊಡ್ಡ ಮನೆಯನ್ನು ಕಟ್ಟಿಸಿದ್ದೇನೆ ಎಂಬ ಹೆಮ್ಮೆ ನನ್ನ ಅಜ್ಜನಿಗೆ.  ಗೆಳತಿಯರನ್ನೆಲ್ಲಾ ಸೇರಿಸಿಕೊಂಡು ಜಗುಲಿಯ ಮೇಲೆ ಆಡಲು ನನಗಂತೂ  ಬಹಳ ಖುಶಿ. ಒಂದೇ ಒಂದು ಬೇಸರವೆಂದರೆ ಈ ಜಗುಲಿಯಲ್ಲಿ ದಿನದ ಮೂರೂ ಹೊತ್ತು ಕೇರಿಯ  ಗಂಡಸರ ಸಭೆ ಸೇರಿರುತ್ತದೆ.  ಅವರ ಸಭೆ ಸೇರಿಲ್ಲದ ಹೊತ್ತು ಮಾತ್ರ ಇದು ನಮ್ಮ  ರಾಜ್ಯ.  ನಮ್ಮಮ್ಮನಿಗೆ ಯಾಕೊ  ಈ ದೊಡ್ಡ ಮನೆ, ದೊಡ್ಡ ಜಗುಲಿ ಎಂದರೆ ಒಂದು ಥರದ  ಅಲರ್ಜಿ.  ಈ ಮನೆಯಲ್ಲಿ ಕಸ ಹರಡಲು  ಐವತ್ತು  ಕೈ,  ಕಸ ಬಳಿಯಲು ಮಾತ್ರ ಎರಡೇ ಕೈ ಅಂತಲೋ, ಈ ಸಭಾ ಸದಸ್ಯರಿಗೆ ಮೂರೂ ಹೊತ್ತು ಚಾ, ಕಷಾಯ ಅಂತ ಹೆಣಗಾಡಲು  ಮೂರು ಇದ್ದವರೇ ಆಗಬೇಕು ಅಂತಲೋ  ಹೇಳುತ್ತಾ   ಇರುತ್ತಾರೆ.  ನನ್ನಕ್ಕನಿಗೂ  ಈ ಜಗುಲಿಯೆಂದರೆ ತುಂಬಾ ಇಷ್ಟ. ಯಾಕೆಂದರೆ ನಮ್ಮ ಕೇರಿಯಲ್ಲಿ ಸಂಗೀತ, ಸಾಹಿತ್ಯದ
ದೊಡ್ಡ ದೊಡ್ಡ ಕಾರ್ಯಕ್ರಮಗಳಾದರೆ  ಮಾತ್ರ, ದೇವಸ್ಥಾನದ ಮಾಳಿಗೆಯ ಮೇಲೆ ಮಾಡುತ್ತಾರೆ. ಸಣ್ಣ ಪುಟ್ಟ ಕಾರ್ಯಕ್ರಮಗಳನ್ನ ನಮ್ಮ ಮನೆ ಜಗುಲಿಯ ಮೇಲೇ ಮಾಡುತ್ತಾರೆ. ಒಮ್ಮೆ ಕಾರಂತಜ್ಜನ  ಪ್ರಶ್ನೋತ್ತರ  ಕಾರ್ಯಕ್ರಮವೂ   ಇಲ್ಲೆ ನಡೆದಿತ್ತು.  ಹೀಗಾಗಿ  ಸಂಗೀತ ಸಾಹಿತ್ಯದ ಪ್ರಿಯೆಯಾದ ನನ್ನಕ್ಕನಿಗೆ  ನಮ್ಮ ಮನೆಯ ಜಗುಲಿಯೆಂದರೆ ಅಷ್ಟೊಂದು ಇಷ್ಟವಾದದ್ದು.

ಇವತ್ತು ಬೇಬಿ ಮನೆಗೆ  ಬಂದ, ಅವಳ ಅತ್ತೆಯ ಮಕ್ಕಳಲ್ಲಾ ಸೇರಿ, ಜಗುಲಿಯ ಮೇಲೆ,  ಎಷ್ಟು ಚೆನ್ನಾಗಿ ಆಟ ಆಡ ಬಹುದಿತ್ತು. ಆದರೆ ಅಮ್ಮ  ವಹಿಸಿದ  ಕೆಲಸದಿಂದ, ನನಗೆ  ಸರಿಯಾಗಿ ಆಟವನ್ನೇ  ಆಡಲಿಕ್ಕೆ ಆಗ್ತಾ  ಇಲ್ಲಾ.  ಅಮ್ಮ ನನಗೆ ಮೇಲಿಂದ ಮೇಲೆ ಎಚ್ಚರಿಸ್ತಾನೆ ಇರ್ತಾಳೆ.  ಅಕ್ಕನ ಮೇಲೆ  ಕಣ್ಣಿಟ್ಟಿರು, ಅವಳನ್ನು ಬಹಳ ಹೊತ್ತು ಒಬ್ಬಳೇ ಇರಲಿಕ್ಕೆ ಬಿಡಬೇಡ ಎಂದು.  ಒಮ್ಮೊಮ್ಮೆ  ನನಗೆ ಅಕ್ಕನ ಮೇಲೆ  ಕೋಪಾನೆ ಬರುತ್ತದೆ.   ಈ ಕೇರಿಯಲ್ಲೇ ಎಷ್ಟೋ  ಅಕ್ಕಂದಿರ  ಮದುವೆ ಆಗಿದೆ. ಮೊನ್ನೆ ಮೊನ್ನೆ ಮದುವೆಯಾದ ಜಾನಕ್ಕಾ, ಸರಸಕ್ಕಾ ಎಲ್ಲರು ಎಷ್ಟು ಖುಷಿಯಾಗಿದ್ದಾರೆ.  ಇವಳು ಮಾತ್ರ ಮದುವೆ ನಿಶ್ಚಯ ಆದಾಗಿನಿಂದ ಮಂಕಾಗಿ ಕುಳಿತು ಬಿಟ್ಟಿದ್ದಾಳೆ.   ಒಂದೊಂದು  ಸಲ ಅಜ್ಜನಮನೆ ಗಜೂಮಾಮ  ಹೇಳೋದೇ ಸರಿ  ಅನ್ಸುತ್ತೆ.  "ಅಕ್ಕೈಯ್ಯ,  ನೀನು ಶಾಲಿನಿಯ  ತಲೆಮೇಲೆ   ಏರಿಸ್ಕೊಂಡು ಕುಳಿತುಕೊಂಡುಬಿಟ್ಟಿದ್ದಿಯಾ. ಅಲ್ಲದೆ  ಅವಳಿಗೆ ಪ್ರಪಂಚದ ಜ್ಞಾನವೂ ಕಡಿಮೆ  ಇರಬೇಕು  ಬಿಡು. ಇಲ್ಲದೆ ಹೋದ್ರೆ ಅಷ್ಟು  ಚಂದದ  ಹುಡುಗ, ಇವಳು ಹೀಗಾಡ್ತಿದ್ದಾಳೆ ಅಂದ್ರೆ ಮತ್ತಿನ್ನೇನು  ಹೇಳ್ಬೇಕು?   ಬೇರೆ  ಹುಡುಗಿಯರಾಗಿದ್ರೆ, ಕನಸಿನಲ್ಲೇ  ಅರಮನೆಯನ್ನ ಕಟ್ಟಿ ಎಷ್ಟು ಖುಶಿಯಾಗಿ  ಇರುತ್ತಿದ್ದರು. ಇವಳು  ಥೇಟ್ ನಮ್ಮನೆ  ಗೌರಿಯ ಅಪಾರವತಾರ  ಅಂತಾನೇ  ಕಾಣಿಸ್ತಾ ಇದೆ" ಅಂತ.  ಹಾಗಂತ ಅಕ್ಕ ಕೆಟ್ಟವಳು ಅಲ್ಲವೇ ಅಲ್ಲಾ.  ಅವಳು  ತುಂಬಾ ಒಳ್ಳೆಯವಳೇ.  ನಾನೆಂದರೆ ಅವಳಿಗೆ ಎಷ್ಟು ಇಷ್ಟ. ಅಮ್ಮನೂ ಹಾಗೆ ಹೇಳ್ತಾಳೆ. ಪಾಪದ ಕೂಸೇ ಅವಳು.  ಆದ್ರೆ ತೀರಾ ತೀರಾ ನಾಜೂಕು. ನಿನ್ನ ಗಜೂ ಮಾವ ಹೇಳಿದ ಹಾಗೆ ಗೌರಿ ಚಿಕ್ಕಿಯ ಹಾಗೆ, ಅವಳದೂ ಒಂದು  ಭಂಡ ಬದುಕು ಆಗದೆ ಹೋದ್ರೆ ಸಾಕು ಮಹರಾಯ್ತಿ. ಹಾಗೇನಾದ್ರೂ ಆದ್ರೆ ನಿನ್ನ  ಅಮ್ಮಂಗೆ ಈ ಬದುಕೇ ಬೇಡಾ  ಅಂತ. 

ನಮ್ಮ ಮನೆಯಲ್ಲಿ ಇಬ್ಬರು ಚಿಕ್ಕಪ್ಪಂದಿರ  ಮಕ್ಕಳು, ಮತ್ತು ನಾನು, ಅಕ್ಕ ಸೇರಿ ಒಟ್ಟು ನಾಲ್ಕ.  ಹೈಸ್ಕೂಲು, ಪಾಠಶಾಲೆ,  ಅಂತ  ಓದಲಿಕ್ಕೆ ನಮ್ಮ ಮನೆಯಲ್ಲಿ ಉಳಿದುಕೊಂಡ ಮಕ್ಕಳು ನಾಲ್ಕು. ಎಲ್ಲಾ ಸೇರಿ ಮನೆಯಲ್ಲಿ ನಾವು ಒಟ್ಟು ಎಂಟು ಮಕ್ಕಳು. ಎಲ್ಲರೂ ಅವರವರ ಹೋಂ ವರ್ಕ್,  ಅಭ್ಯಾಸ ಮುಗಿಸಿ, ಮೆತ್ತು ಹತ್ತಿದರೆ ಹಾಡು, ಕಥೆ, ಚರ್ಚೆ, ಜಗಳ, ಕುಸ್ತಿ, ಆ ಲೋಕವೇ ಬೇರೆ. ಆದರೆ ಅಕ್ಕ ಅವಳ ಮದುವೆ  ಗೊತ್ತಾದಾಗಿನಿಂದ,  ಮೇಲಿನ ಮೆತ್ತಿಗೆ ಹೋಗಿ ಕುಳಿತು ಬಿಡುತ್ತಿದ್ದಳು . ಮೇಲಿನ ಮೆತ್ತಿ ಅಂದರೆ ಅಲ್ಲಿ ಗಾಳಿ ಬೆಳಕು ತುಂಬಾ ಕಡಿಮೆ. ಅದು ಮಡಿ ಬಟ್ಟೆಯನ್ನು ಒಣಗಿಸಲಿಕ್ಕೆ ಮಾತ್ರ ಉಪಯೋಗಿಸುತ್ತಾರೆ.   ನಮ್ಮ ಮನೆಯ ರಾಜತ್ತೆ ಮಾತ್ರ ಕೋಪ ಬಂದಾಗ ಅಲ್ಲಿ ಹೋಗಿ ಕುಳಿತು ಬಿಡುತ್ತಿದ್ದಳಂತೆ.   ಅದಕ್ಕೇ ಮೇಲಿನ ಮೆತ್ತಿಗೆ  'ರಾಜಿಯ ಕೋಪ ಗೃಹ' ಎಂದು, ಅಜ್ಜಿ ತಮಾಷೆ ಮಾಡುತ್ತಿದ್ದರಂತೆ.  ಇದನ್ನು ನನಗೆ ಯಾವಾಗಲೋ ರಘು ಚಿಕ್ಕಪ್ಪ ಹೇಳಿದ್ದು.  ಮೇಲಿನ ಮೆತ್ತಿಯಲ್ಲಿ  ಹಳೆ ಹಳೆ  ಚಂದಮಾಮ, ಸೋವಿಯತ್ ದೇಶ, ಕಸ್ತೂರಿ,  ಮುರುಕು ಖುರ್ಚಿ, ಹಳೆ ಪಾತ್ರೆಗಳು ತುಂಬಿಕೊಂಡು, ಅಲ್ಲಿ ಒಂದು ಥರಾ ಉಸಿರು ಕಟ್ಟಿಸುವ ವಾತಾವರಣವಿತ್ತು.  ಈಗೀಗ ಅಕ್ಕ ಯಾವುದೋ ಹಳೆ ಪುಸ್ತಕವನ್ನು ಓದುತ್ತಲೋ, ಅಥವಾ ಸುಮ್ಮನೆ ಖುರ್ಚಿಗೆ ಒರಗಿಯೋ, ಅಲ್ಲೇ  ಕುಳಿತುಕೊಂಡು ಬಿಡುತ್ತಿದ್ದಳು.  ಅಮ್ಮನಿಗೆ  ಯಾವಾಗಲೂ  ಬೆನ್ನು  ನೋವು. ಆದಕ್ಕೆ  ಅಮ್ಮ ರಾತ್ರಿ ಮಲಗಿಕೊಂಡಾಗ ಬೆನ್ನ  ಗುದ್ದಿಸಿಕೊಳ್ಳಲು ಅವಳ ಕೋಣೆಗೆ  ನನ್ನ  ಕರೆಯುತಿದ್ದಳು.  ಆಗ ಅಕ್ಕನ ಬಗ್ಗೆ ಸಣ್ಣದನಿಯಲ್ಲಿ ಅಪ್ಪನ  ಹತ್ತಿರ  ಹೇಳುತಿದ್ದಳು. ಆದಕ್ಕೆ ಅಪ್ಪ,  ಅವಳು ಸರಿಯಾಗೇ ಇದ್ದಾಳೆ. ನಿನಗೆ ಬೇರೆ ಕೆಲಸವಿಲ್ಲ  ನೋಡು, ಅಂದು ರೇಗಾಡ್ತಿದ್ರು. 'ಶ್,  ಶ್,  ಸಣ್ಣಕೆ ಮಾತಾಡಿ ಪಕ್ಕದ ಕೋಣೆವರೆಗೂ, ನಮ್ಮ ಜಗಳ ಕೆಳ್ಗು ' ಅನ್ನುತ್ತಿದ್ದಳು  ಅಮ್ಮ.  ಇವರು  'ಯಾವಾಗ  ನನ್ನ ಮಾತ  ಕೇಳಿದ್ದು  ಇದ್ದು',  ಎಂದು  ಬೇಸರ  ಮಾಡಿಕೊಳ್ಳುತ್ತಿದ್ದಳು  ಆಮ್ಮ,  ಮತ್ತು  ನನ್ನ ಹತ್ತಿರವೂ  ಬೆನ್ನು ಗುದ್ದಿದ್ದು  ಸಾಕು  ಪುಟ್ಟಿ, ನೀನು  ಹೋಗಿ ಮಲಗಿಕೊ ಎಂದು ಮುಸುಕು ಹಾಕಿ ಮಲಗಿ ಬಿಡುತ್ತಿದ್ದಳು.
ಅವತ್ತು  ಗಂಡಿನ  ಕಡೆಯವರು,  ಅಕ್ಕನ ಮದುವೆ ನಿಶ್ಚಿತಾರ್ಥಕ್ಕೆ  ಬಂದ ದಿನ, ಎಷ್ಟು ಚೆನ್ನಾಗಿತ್ತು. ಮನೆ ತುಂಬಾ ನೆಂಟರು.  ಎಷ್ಟೊಂದು  ಬಗೆಯ ಸಿಹಿ ತಿಂಡಿಗಳು. ಸಂಭ್ರಮವೋ ಸಂಭ್ರಮ.  ಆದರೆ ಅಕ್ಕ  ಮಾತ್ರ ಆವತ್ತಿನಿಂದ ಡಲ್ ಆಗ್ಬಿಟ್ಟಿದ್ದಳು.  ದಿನಾಲು ಬೆಳಿಗ್ಗೆ  ನಾನು ಅಕ್ಕನ ಜೊತೆ ಹೂ ಕೀಳಲು ಹೋದಾಗ,  ಎಷ್ಟೊಂದು  ಮಾತನಾಡುವವಳು.  ಈಗ ಮಾತ್ರ ಮಾತಿಲ್ಲ,  ನಗುವಿಲ್ಲಾ. " ಅಷ್ಟೊಂದು  ಉತ್ಸಾಹದ  ಚಿಲುಮೆಯಾಗಿದ್ದವಳು  ಯಾಕೆ ಹೀಗೆ ಮೌನ ಗೌರಿಯಾಗಿದ್ದಾಳೆ.  ಮದುವೆ ಹೆಣ್ಣು, ಮೈ ಕೈ ತುಂಬಿ ಕೊಳ್ಳುವ ಬದಲು, ಎಷ್ಟೊಂದು  ಇಳಿದು ಹೋಗಿದ್ದಾಳೆ. ಆ ಹುಡುಗನೇ ಈಗ ಬಂದು ನೋಡಿದರೆ ಅವನಿಗೆ ಇವಳ  ಗುರುತೂ  ಸಿಗಲಿಕ್ಕಿಲ್ಲಾ."  ಎಂದೆಲ್ಲ  ಅಮ್ಮ ಪೇಚಾಡುತ್ತಲೇ  ಇದ್ದಳು .  ನನಗೆ  ಅಮ್ಮನ ನೋಡಿದಾಗ,   ಒಂದು ಸಲ ಬೇಸರವಾದರೂ,  ಅಕ್ಕನ ಮದುವೆ  ಎಂದು ತುಂಬಾ ಖುಶಿನೇ  ಆಗಿತ್ತು.  ನಮಗೆಲ್ಲಾ  ಎರಡೆರಡು ಹೊಸಾ ಡ್ರೆಸ್ಸಿನ ಜೊತೆಗೆ ಮನೆಯ ಮೊದಲನೇ ಮಗಳ ಮದುವೆ ಎಂದು ಮನೆಯ ಎಲ್ಲಾ ಹೆಣ್ಣು ಮಕ್ಕಳಿಗೂ,  ಅಪ್ಪ ಕಿವಿಗೆ ಝುಮಕಿನೂ  ಮಾಡಿಸಿದ್ದರು.   ನಾವು ಮನೆಯ ಮಕ್ಕಳೆಲ್ಲರೂ  ಸೇರಿ  ಬಹಳ ಸಂತೋಷದಿಂದಾ ಮದುವೆ  ತಯಾರಿಯಲ್ಲೇ ಮುಳುಗಿಬಿಟ್ಟಿದ್ವಿ.

ಮದುವೆಗೆ  ಇನ್ನು  ಎರಡು ದಿನ  ಇದೆ ಅನ್ನುವಾಗ,  ನಾವಲ್ಲಾ ಸೇರಿ ಮೆತ್ತಿಯ ಮೇಲೆ  ಪನಿವಾರದ  ಪೊಟ್ಟಣ  ಮಾಡ್ತಾ ಇದ್ವಿ. ಆಗ ಅಮ್ಮ, ಕಣ್ಸನ್ನೆಯಲೇ ನನ್ನ ಅವಳ ಕೋಣೆಗೆ ಕರೆದಳು. ಆಗ ಅವಳ  ಮುಖದಲ್ಲಿ   ಸ್ವಲ್ಪ ಆತಂಕ  ಇತ್ತು  ಅಂತ  ನನಗನಿಸ್ತು. ಮತ್ತು ಅವಳು ನನಗೆ ಹೇಳಿದಳು.   ಅಕ್ಕ ಮದುವೆ ಮರುದಿನವೇ ಅವಳ ಗಂಡನ ಮನೆಗೆ ಹೋಗ್ತಿದ್ದಾಳೆ ಪುಟ್ಟಿ,  'ನಿನಗೆ ಹೇಗೂ ಈಗಾ ಎರಡು ತಿಂಗಳ ರಜೆ ಇದೆ.  ನೀನು ಅಕ್ಕನ ಜೊತೆಗೆ  ಹೋಗ್ತಿಯಾ?'  ಅಂತ ಕೇಳಿದಳು. ಅಯ್ಯೋ  ಎರಡು ತಿಂಗಳ ರಜದಲ್ಲಿ ಇಡೀ  ಕೇರಿಗೆ ಎಷ್ಟೊಂದು  ಸ್ನೇಹಿತೆಯರು ಬರುತ್ತಾರೆ. ಗುಡ್ಡಬೆಟ್ಟಗಳನ್ನೆಲ್ಲ ಸುತ್ತಾಡಿ ಮುಳ್ಳೇಹಣ್ಣುಗಳನ್ನ ಕೊಯ್ಯುವುದು, ಕೊಕ್ಕಾರ ಹೊಳೆಯಲ್ಲಿ ಈಜುವುದು, ದ್ಯಾವನ ಬ್ಯಾಣದ ಮೇಲೆ ಲಗೋರಿ ಆಡುವುದು,  ಎಷ್ಟೊಂದು ಮಜಾ ಮಾಡುವುದಿತ್ತು. ಇದನ್ನೆಲ್ಲಾ ಬಿಟ್ಟು ಅಕ್ಕನ ಜೊತೆ ಹೋಗಬೇಕಾ?  ರವಿಯಣ್ಣ ಬೇರೆ ಅಕ್ಕನ  ಹತ್ತಿರ  ಹೇಳ್ತಿದ್ದ.  'ಎಂತೆ ತಂಗಿ ನಿನ್ನೂರು ಅಂದ್ರೆ, ಅತ್ಲಾಗೆ ಹಳ್ಳಿಯ  ಸೊಗಡೂ ಇಲ್ಲೆ. ಇತ್ಲಾಗೆ ಪೇಟೆಯ ಮಜಾನು ಇಲ್ಲೆ.  ಆ ಕಾಲೋನಿ ಲೈಪ್ ಅಂದ್ರೇ ಬೇಜಾರು'  ಅಂತ.  ಆದರೆ  ಈಗ ನಾನು ಹೋಗುವದಿಲ್ಲ ಅಂತ,  ಅಮ್ಮಂಗೆ ಹ್ಯಾಗೆ ಹೇಳಲಿ?

 ಅಮ್ಮ,  ನನಗೆ ಹಾಗು  ಅಕ್ಕನಿಗೆ   ಮಾತಿಗೆ  ಸಿಕ್ಕುವುದೇ  ಕಡಿಮೆ.  ಅಮ್ಮನಿಗೆ  ಬಿಡುವು  ಇರುವುದೇ   ಇಲ್ಲಾ.  ಅವಳು ಯಾವಾಗಲು ಏನಾದರು ಕೆಲಸ ಮಾಡುತ್ತಲೇ  ಇರುತ್ತಾಳೆ. ನನಗೆ ಅಮ್ಮ  ಬೇಕು  ಅನಿಸಿದಾಗಲೆಲ್ಲಾ ನಾನು ಅವಳ ಹಿಂದೆಯೇ ತಿರಗುತ್ತಿರುತ್ತೇನೆ. ಆವಾಗಲೇ ಅವಳು ನನ್ನ ಸ್ಕೂಲ್ ಬಗ್ಗೆ,  ಗೆಳತಿಯರ ಬಗ್ಗೆ , ಏನಾದರು  ಕೇಳುವುದು. ಇಲ್ಲವಾದರೆ ಅಮ್ಮ ಮೇಲಿನ ಕೊಟ್ಟಿಗೆಯ ಹತ್ತಿರ ಇರೋ ಹಿತ್ಲಿಗೆ ನೀರು ಹಾಕಲು ಹೋದಾಗ  ಬಹಳ ಸಲ ನಾನೂ  ಅವಳ ಜೊತೆ ಹೋಗ್ತೇನೆ .  ಅಮ್ಮ ಆಗ   ಗಿಡಕ್ಕೆ ನೀರು ಹಾಕುತ್ತಲೋ, ಗೊಬ್ಬರ ಹಾಕುತ್ತಲೋ, ನನ್ನ ಹತ್ತಿರ ಮಾತಾಡುತ್ತ ಇರುತ್ತಾಳೆ.  ಇತ್ತಿಚೆಗಂತಲೂ ಅಮ್ಮ, 'ನೀ ಬರುವಾಗ, ಅಕ್ಕನ್ನು ಕರೆದುಕೊಂಡು ಬಾ.  ಅವಳಂತೂ ಇತ್ತೀಚಿಗೆ  ಮೂದೇವಿನೆ  ಆಗ್ಬಿಟ್ಟಿದ್ದಾಳೆ.  ಅವಳ ಹತ್ತಿರ  ಒಂದಿಷ್ಟು  ಮಾತನಾಡಬೇಕು' ಎನ್ನುತ್ತಾಳೆ.  ಆದಕ್ಕೆ  ಈಗ ಅಲ್ಲಿಯೂ  ಅಮ್ಮ ನನಗೆ  ಮಾತಿಗೆ ಸಿಗುವುದೇ ಇಲ್ಲಾ.   ಈಗ ಅಮ್ಮ ಇಷ್ಟು ಪ್ರೀತಿಯಿಂದಾ ನನ್ನ ಹತ್ತಿರ,  ಅಕ್ಕನ ಜೊತೆಗೆ ಹೋಗ್ತಿಯಾ ಮರಿ  ಅಂದಾಗ,   ನಾನು  ಹೋಗುವುದಿಲ್ಲ  ಅಂತ ಹೇಗೆ ಹೇಳಲಿ?   ನಾನು ಅಮ್ಮನ ಮುಖವನ್ನೇ ನೋಡಿದೆ.  ನಾನು 'ಹೂಂ' ಅನ್ನುವದರಲ್ಲೇ  ಅಮ್ಮ ನನ್ನನ್ನು ತನ್ನ ಎದೆಗವಚಿ ಹಿಡಿದುಕೊಂಡು,   'ಪುಟ್ಟಿ, ನಿನಗೆ ನನ್ನ ಬಿಟ್ಟು ಹೋಗಲು ಮನಸ್ಸಿಲ್ಲ ಅಂತ ನನಗೆ ಗೊತ್ತು ಮರಿ,  ಆದರೆ  ನಿನ್ನ ಅಕ್ಕನ ಮೇಲೆ ನನಗೆ ಭರವಸೆಯೇ ಹೊರಟು ಹೋಗಿದೆ  ಪುಟ್ಟಿ. ಈ ಅವತಾರವನ್ನೇ ಅವಳ ಗಂಡನ  ಹತ್ತಿರವೂ ಮುಂದುವರಿಸಿದರೆ  ಏನ್ಮಾಡೋದು?  ಈಗ ನಮ್ಮ ವಂಶಕ್ಕೆ  ಗೌರಿ ಚಿಕ್ಕಿ  ಒಬ್ಬಳೇ  ಸಾಕು.  ಗಂಡನ ಬಿಟ್ಟು ಬಂದವಳು ಅಂತ  ಹೇಳಿಸಿ ಕೊಳ್ಳಲಿಕ್ಕೆ.  ನಾನು  ಅಕ್ಕನಿಗೆ  ಎಲ್ಲಾ ಹೇಳಿ ಕಳುಹಿಸ್ತೇನೆ. ನೀನು ಅವಳ ಜೊತೆಗೆ ಹೋಗು.  ಅವಳು ಸುಧಾರಿಸುತ್ತಾಳೊ  ನೋಡೋಣ.  ನೀನು ಅವಳ ಜೊತೆ ಇದ್ದರೆ  ನನಗೆ  ಅವಳ ವಿಷಯವಾದ್ರು  ತಿಳಿಯುತ್ತದೆ.  ಇಲ್ಲದೆ ಹೋದ್ರೆ  ಅವಳು  ಹೇಗಿದ್ದಾಳೆ?  ಏನು? ಅಂತ ನನಗೆ ಗೊತ್ತಾಗುವುದಾದರೂ  ಹೇಗೆ?  ಒಂದು ತಿಂಗಳ ಬಿಟ್ಟು  ನಾನು ಅಪ್ಪನ್ನ  ಕಳುಹಿಸ್ತೇನೆ.  ಅಕ್ಕ ಮೊದಲಿನ  ಹಾಗೆ ನಗ್ತಾ ನಗ್ತಾ ಖುಷಿಯಲ್ಲಿ ಇದ್ರೆ ನೀನು ಅಪ್ಪನ ಜೊತೆ ಮನೆಗೆ ಬಂದ್ಬಿಡು ಆಯ್ತಾ'.  ಎಂದು  ಅಮ್ಮ ನನಗೆ ತುಂಬಾ ಮುದ್ದು ಮಾಡಿದಳು.

ಅಕ್ಕನ ಮದುವೆ ಬಹಳ ಸಂಭ್ರಮದಲ್ಲೇ  ಮುಗಿಯಿತು. ಅಮ್ಮ ಹೇಳಿದಂತೆ ನಾನು ಅಕ್ಕ ಭಾವನ  ಜೊತೆಗೆ ಹೊಸ ನಗರಕ್ಕೆ ಬಂದಾಗಿತ್ತು.  ಭಾವ ಬಹಳ ಒಳ್ಳೆಯವರಾಗಿದ್ರು. ಹೊಸ ನಗರವೂ   ತುಂಬಾ ಚಂದವಾಗಿತ್ತು. ಎಲ್ಲಾ ಒಂದೇ ಥರದ ಮನೆಗಳು. ಅಲ್ಲಿದ್ದ ದೊಡ್ಡ ದೊಡ್ಡ ರೋಡ್ ಮೇಲೆಯೇ  ಆಟ ಆಡಬಹುದಾಗಿತ್ತು. ಅಮ್ಮ ಹೇಗೂ ನನಗೆ ಚಿನ್ನಿ, ದಾಂಡು, ಗೋಲಿ, ಬಾಲ್ , ಎಲ್ಲಾ  ಆಟಿಕೆಗಳನ್ನು ಕಳುಹಿಸಿದ್ದಳು .  ಮೊದಲೆರಡು ದಿನ  ನಾನೊಬ್ಬಳೆ ಆಟ ಆಡಿಕೊಂಡೆ.  ಆಮೇಲೆ  ಅಕ್ಕ ಪಕ್ಕದ ಮಕ್ಕಳೆಲ್ಲಾ ಬಂದು  ಸೇರಿಕೊಂಡರು. ರವಿಯಣ್ಣ ಹೇಳಿದ ಹಾಗೆ ಈ ಊರು ಬೋರಾಗೆನಿರಲಿಲ್ಲಾ. ಅಮ್ಮ ನನಗೆ ಬರುವಾಗ ಹೇಳಿದ್ದಳು 'ಅಕ್ಕನ ರೂಮಿಗೆ ಹೋಗಬೇಡ. ಅವರಿಬ್ಬರ ಮಧ್ಯೆ ಹೆಚ್ಚಾಗಿ ಇರಬೇಡಾ.  ನಿನಗೆ ಬೇಸರ ಬಂದರೆ ನಿನ್ನ  ಚೀಲದಲ್ಲಿ  ಚಿತ್ರದ ಪುಸ್ತಕ ಹಾಕಿರ್ತೇನೆ. ಏನಾದರು ಚಿತ್ರ ಬಿಡಿಸುತ್ತ ಇರು 'ಎಂದು. ಹೊಸ ಊರು  ಹೊಸ ಗೆಳತಿಯರು   ನಾನು  ಖುಶಿಯಾಗೇ  ಇದ್ದೆ.  ಆಮೇಲೆ  ದಿನ  ಕಳೆದಂತೆ  ರಾತ್ರಿ  ನನಗೆ  ಅಮ್ಮನ  ನೆನಪಾಗಿ  ಅಳು  ಬರುತ್ತಿತ್ತು.  ಪಾಪ  ಅಕ್ಕ, ಹಸಿವೆಯಾಗುತ್ತಾ,  ಬೇಸರ ಬರುತ್ತಾ,  ಅಂತ ಕೇಳ್ತಾನೆ  ಇರುತ್ತಿದ್ಲು. ಭಾವನೂ ತುಂಬಾ ಚೆನ್ನಾಗೆ ಮಾತನಾಡಿಸುತಿದ್ರು. ಆದ್ರೆ ನನಗೇಕೋ  ಮನೆಗೆ ಹೋಗ್ಬೇಕು.  ಮತ್ತು ಅಮ್ಮನ ನೋಡ್ಬೇಕು ಅಂತಾ ತುಂಬಾ ಅನಿಸ್ತಿತ್ತು. ಆದರೆ ಅಮ್ಮ ಹೇಳಿದ ಹಾಗೆ  ಅಕ್ಕ  ಖುಷಿಯಾಗಿ  ಇದ್ದಾಳೋ  ಇಲ್ಲವೋ  ಅಂತಾನೆ  ನನಗೆ ಗೊತ್ತಾಗ್ತಿರಲಿಲ್ಲಾ.   ಒಂದೊಂದು  ದಿನ   ಭಾವ ಹೊರಗೆ ತಿರುಗಾಡಿ ಬರೋಣ  ಎಂದರೆ, ಅಕ್ಕ,  ಹೋಗದೆ  ಸುಮ್ನೆ ಜೋಲು ಮುಖ  ಮಾಡಿಕೊಂಡು  ಮನೆಯಲ್ಲೇ  ಕೂತಿರುತಿದ್ಳು.   ಮತ್ತೆ  ಒಂದೊಂದುದಿನ   ತಾನಾಗಿಯ ಭಾವನ  ಜೊತೆ  ಹೊರಗೆ ತಿರುಗಾಡಲು  ಹೋಗುತ್ತಿದ್ದಳು.  ಬರುವಾಗ  ಏನಾದರು ಪುಸ್ತಕಾನೋ, ಡ್ರೆಸ್ಸನ್ನೊ  ತಂದುಕೊಳ್ಳುತ್ತಿದ್ಲು.  ಆಗೆಲ್ಲಾ  ಅವಳಿಗೆ ಬಹಳ  ಖುಶಿ. ನನಗೂ ಎಷ್ಟು ಪ್ರೀತಿಯಿಂದಾ ಚೋಕಲೇಟೋ, ಕೇಕೋ, ತರುತಿದ್ಲು. ಆದರೆ ಕೆಲವೊಂದು  ದಿನ ಇದ್ದಕ್ಕಿದ್ದ ಹಾಗೆ,  ಬೆಳಿಗ್ಗೆಯಿಂದಾ  ರಾತ್ರಿವರೆಗೂ  ಮಾತಿಲ್ಲಾ ಕಥೆ ಇಲ್ಲಾ.  ಇಡೀ ದಿನವೂ ಮೌನವೇ. ಆದರೆ ಬೆಳಿಗ್ಗೆ ಏಳುವಷ್ಟರಲ್ಲಿ ಅಕ್ಕ ಉತ್ಸಾಹದ ಚಿಲುಮೆಯಾಗಿರುತಿದ್ಲು.  ಅವಳು ಒಂದು ದಿನ ಹಾಗಿದ್ರೆ, ಇನ್ನೊಂದು ದಿನ ಹೀಗಿರುತ್ತಿದ್ಲು.   ಹಾಗಾಗಿ  ನನಗೆ,  ಅಕ್ಕ ಖುಷಿಯಾಗಿ ಇದ್ದಳೋ ಇಲ್ಲವೂ  ಅಂತಾನೇ   ಗೊತ್ತಗ್ತಾ  ಇರ್ಲಿಲ್ಲಾ.  ಮತ್ತು ನಾನು ಅಪ್ಪನ ಜೊತೆ ಊರಿಗೆ ಹೋಗುವುದೋ ಬಿಡುವುದೋ ಅಂತಾನು ಗೊತ್ತಾಕ್ತ  ಇರ್ಲಿಲ್ಲಾ.   ದಿನವಿಡೀ  ಅದೊಂದೇ  ಯೋಚನೆ ಆಗ್ಬಿಡ್ತಿತ್ತು  ನನಗೆ.

Thursday, January 28, 2010

ಸಾಗುತ ಸಾಗುತ ದೂರಾ ದೂರಾ




ಬೀಸುವ  ಗಾಳಿಗೆ,  ಬೀಳುವ  ಮಳೆಗೆ, ಸುರಿಯುವ  ಹಿಮಕ್ಕೆ,  ಹರಿಯುವ  ತೊರೆಗೆ,  ವಿವಿಧ  ಬಣ್ಣಗಳಿಂದ  ಕಂಗೊಳಿಸುವ ಮರಗಿಡಕ್ಕೆ, ಅದರದೇ   ಆದ  ರೂಪ,  ಸೌಂದರ್ಯ, ವನಪು, ವೈಯ್ಯಾರ. ಸವೆಸುವ  ದಾರಿಯಲಿ ಸವಿಯುವ  ಮನಸೊಂದಿದ್ದರೆ  ಎಲ್ಲವೂ  ಚಂದ  ಚಂದವೇ. ಹಸಿರ  ವನಸಿರಿಯಲ್ಲಾ  ತಮ್ಮಷ್ಟಕ್ಕೆ ತಾವೇ ಹೊಸ ತೊಡುಗೆ  ತೊಟ್ಟು, ಕಣ್ ಮನ ತಣಿಸುವ  ಪರಿಯೇ  ಅನನ್ಯ. ಅವುಗಳ ಮೇಲೆ ಕಣ್ಣ  ಹಾಯಿಸಿದುದ್ದಕ್ಕೂ  ಹಳದಿ, ಕೆಂಪು, ಪೀತಾಂಬರ, ವಿವಿಧ  ಬಣ್ಣಗಳ  ರಾಶಿ. ಕಣ್ಣು ಅವುಗಳ ಬಣ್ಣವನ್ನು ಗುರುತಿಸಲೂ ಸೋಲುತ್ತವೆ. ಈ  ಅಪರೂಪದ  ಸೌಂದರ್ಯವನ್ನ  ಕಣ್  ತುಂಬಿಸಿಕೊಳ್ಳುವಷ್ಟರಲ್ಲಿಯೇ ಎದುರು   ನಿಂತ  ದೃಶ್ಯ   ನಯನ ಮನೋಹರವಾದ  ಜಲಪಾತ.   ಭೋರ್ಗರೆವ  ಜಲರಾಶಿಯ  ಎದುರು ನಿಂತು,  ಅದರ  ಸೊಬಗಿಗೆ  ಮೈ ಮರೆಯುವ  ಕ್ಷಣಕ್ಕೆ  ಅದೆಂತದೋ  ಧನ್ಯತಾ ಭಾವ. ಆ  ಸೌಂದರ್ಯದ   ಮತ್ತಿಗೆ  ಮಾತಲ್ಲ,  ಉಸಿರೇ  ನಿಂತ  ಅನುಭವ.   ಮುಂದುವರಿದ   ದಾರಿಯಲ್ಲಿ ಇದ್ದಕ್ಕಿದ್ದ ಹಾಗೆ  ಹಸುರು   ಹುಲ್ಲಿನ  ಮೇಲೆ  ಸುರಿದ  ಹಿಮರಾಶಿಗೆ   ಅದೆಂಥಾ   ಸೊಬಗು.   ಹಿಮದಿಂದ  ಆವೃತವಾದ  ಪ್ರಕೃತಿ,  ಶುಭ್ರವಸನೆಯಾಗಿ  ಮೈ ತಳೆದು   ನಿಂತಂತಾ ಭಾವ. ಹತ್ತಿಯಷ್ಟೇ  ಹಗುರಾದ  ಹಿಮ ಮಣಿ  ಮೈ  ಸ್ಪರ್ಶಿಸಿದಾಗ  ಅದೆಂಥಾ ಪುಳಕ! ಈ ಸುಂದರ  ದಾರಿಯಲ್ಲಿ  ಸಾಗಿ ಬಂದ  ದೂರವೇ ಗೊತ್ತಾಗಲಿಲ್ಲಾ.  ಇನ್ನೇನು  ಪಯಣವೇ ಮುಗಿದು ಹೋಯಿತು.  ಇದು  ಇಷ್ಟು ಬೇಗ ಮುಗಿದು ಹೋಯಿತೇ  ಎಂದು  ಅಂದುಕೊಂಡಿದ್ದು  ಸಾವಿರ  ಸಲ.

ಬಂದ ದಾರಿಯಲ್ಲಿ ಒಮ್ಮೆ ಹಿಂತಿರುಗಿ ನೋಡಿದರೆ....ಈ ಪಯಣಕ್ಕೆ  ನಡೆಸಿದ  ಸಿಧ್ಧತೆ ಕಡಿಮೆಯಾ ?  ಎಷ್ಟೋ  ದಿನದ ಚಿಂತನ ಮಂಥನಗಳ  ನಂತರ   ಪ್ರಯಾಣದ ನಿರ್ಧಾರ. ನಿರ್ಧಾರ  ತೆಗುದು ಕೊಂಡ ನಂತರವೂ ಕೂಡಾ  ಇದು ಸಾಧ್ಯವಾ?  ಅನ್ನುತ್ತಿತ್ತು  ಮನ ನೂರು  ಸಲ. ಈ  ಮನೆಯ ಒಂಟಿತನಕ್ಕೆ ಯಾರು ಜೊತೆ?  ಮನೆಯ ಕಾಯುವ  ಜೂಲಿ, ಮನೆಯ ಅಂಗಳದ ಗಿಡಗಳು,  ಸುತ್ತಿಕೊಂಡ  ಸಂಸಾರಗಳು,  ಒಂದಾ ಎರಡಾ ಸಮಸ್ಯೆಗಳು. ಅವುಗಳಿಗೆಲ್ಲಾ  ಪರಿಹಾರ   ಸಿಕ್ಕ  ಭಾವದ  ನಂತರ  ಕಾಡಿದ್ದು   ಭಾವುಕ  ಜಗತ್ತು.  ಒಂದೆರಡಲ್ಲ  ಆರು  ತಿಂಗಳು,  ಅಕ್ಕ ಪಕ್ಕದ ಸ್ನೇಹಿತೆಯರು, ನೆಚ್ಚಿಕೊಂಡ  ಸ್ವರ  ಸಾಮ್ರಾಜ್ಯ,  ಅರ್ಧ  ಓದಿಟ್ಟ   ಕಾದಂಬರಿಯ  ಪುಟಗಳು, ಇವೆಲ್ಲವನ್ನೂ ದಾಟಿ  ಹೊರಟಾಗ   ಏಳೋ ಹನ್ನೊಂದೋ.

ಪಶ್ಚಿಮ ಎಂದರೆ ಏನೋ ಕುತೂಹಲ. ಪಶ್ಚಿಮದಲ್ಲಿ  ಎಲ್ಲವೂ ನವನವೀನ. ಅಲ್ಲಿ ಬೀಸುವ ಗಾಳಿಯು ಹೊಸ ಗಾಳಿ ಎಂಬ ಭಾವ  ಪೂರ್ವಕ್ಕೆ.  ಆದರೆ  ಆ  ದಾರಿಗೆ ಮುಖ ಮಾಡಿ  ನಿಂತಾಗಲೇ   ಗೊತ್ತು, ಅದರ ತವಕ ತಲ್ಲಣಗಳು.  ಇಲ್ಲಿ  ತುಳಿವ  ದಾರಿ  ಹಿಂದೆ ನಡೆದ  ದಾರಿಗಿಂತಲೂ ಭಿನ್ನ ಎಂಬ ಪ್ರಜ್ಞೆಗೇ,  ಅಡಿಗಡಿಗೂ ಅನುಮಾನ, ಆತಂಕಗಳು.  ಆತಂಕದ  ನಡುವೆಯೇ   ಇಡುವ   ಉತ್ಸಾಹದ   ಹೆಜ್ಜೆ.   ಈ ಪಯಣದ  ಆರಂಭವೇ   ಒಂದು ಸೋಜಿಗ.   ಇತ್ತ  ಭುವಿಯೂ  ಅಲ್ಲದ,  ಅತ್ತ ಆಗಸವೂ  ಅಲ್ಲದ,  ಆ ಆಕಾಶಯಾನ  ವರ್ಣನೆಗೆ ನಿಲುಕದ್ದು. ನಾವು ಎಲ್ಲಿದ್ದೇವೆ  ನಮ್ಮ ಅಸ್ತಿತ್ವವೇನು  ಎಲ್ಲಾ ಗೋಜಲು ಗೋಜಲು ಅನಿಸಿಕೆಗಳು . ಪೂರ್ವವೂ ಅಲ್ಲದ, ಪಶ್ಚಿಮವೂ ಅಲ್ಲದ,  ರಾತ್ರಿಯೂ  ಅಲ್ಲದ, ಹಗಲೂ  ಅಲ್ಲದ,  ನಿದ್ರೆಯೂ  ಅಲ್ಲದ, ಎಚ್ಚರವೂ  ಅಲ್ಲದ,  ಅದೊಂದು ತ್ರಿಶಂಕು ಸ್ಥಿತಿ.  ಈ  ಸ್ಥಿತಿಯಲ್ಲೇ , ರಾತ್ರಿಯು   ಹಗಲಾಗಿ , ಹಗಲು  ರಾತ್ರಿಯಾಗುವ ಸಮಯದಲ್ಲಿ,  ಮತ್ತೆ   ಭೂಸ್ಪರ್ಶ.  ಆಗ  ಮನಕ್ಕೆ  ಒಂದು ತರಹದ  ಬಂಧ  ಮುಕ್ತದ  ಭಾವ.   ಹೊಸ ನೆಲ. ಹೊಸ  ಹೊಸ  ಮುಖ. ಸುತ್ತ ಮುತ್ತೆಲ್ಲವೂ   ಹೊಸತು. ಮೈಯಲ್ಲಾ  ಕಣ್ಣಾಗಿ, ಕಿವಿಯಾಗಿ.........ಇಡೀ ಪಂಚೆಂದ್ರಿಯವೇ  ಆಗಿ, ಹೊಸ ಜಗತ್ತನ್ನು ನೋಡುವ ಕಾತುರ.

ಜನಜಂಗುಳಿ ಇಲ್ಲದ ವಿಶಾಲವಾದ ರಸ್ತೆ.  ಶರವೇಗದಲ್ಲಿ  ಸಾಗಿದರೂ,  ಸ್ಪರ್ಧೆಗಿಳಿಯದೆ  ಸಾಗುವ  ವಾಹನಗಳು.  ಝಗಮಗಿಸುವ    ದೀಪಗಳಿಂದ ಸಾಲಂಕೃತಗೊಂಡ ದಾರಿಯಲ್ಲಿ ಹೀಗೆ ಸಾಗುತ್ತಲೇ ಇದ್ದುಬಿಡೋಣ ಅನ್ನುವ  ಬಯಕೆ.

ಹಿತವಾದ ತಂಪುಗೊಳಿಸಿದ ವಾಹನದ ಕೆಳಗಿಳಿದು, ದೃಷ್ಟಿ ಹೊರ ನೆಟ್ಟಾಗ  ಕಣ್ಸೆಳೆದದ್ದು, ಸುತ್ತಲಿನ ಹಚ್ಚಹಸುರಿನ ಪ್ರಪಂಚ. ಹುಡುಕಿದರೂ    ಕಸ ಕಡ್ಡಿ  ಸಿಗದ  ಸ್ವಚ್ಛ  ಪ್ರಶಾಂತ  ವಾತಾವರಣ.  ಅದರ  ನಡುವೆ ಶಾಂತ ಬಣ್ಣದಲ್ಲಿ ಅದ್ದಿ ನಿಲ್ಲಿಸಿದಂಥ  ಮಾಟವಾದ  ಮನೆ.   ಮನೆ,  ಮನದಲ್ಲಿ    ಆವರಿಸಿಕೊಂಡ    ಅತ್ಮಿಯತೆಗೆ, ಪ್ರೀತಿಗೆ, ತ್ಯಾಗಕ್ಕೆ  ಭರವಸೆಗೆ  ಯಾವ  ಹೋಲಿಕೆ?  ಚಿಗುರನ್ನು  ಹುಡುಕಿಕೊಂಡು  ಬಂದ  ಬೇರಿಗೆ  ತಂಪೆರೆದಷ್ಟೂ   ಕಡಿಮೆ ಎಂಬ  ಭಾವ   ಚಿಗುರಿಗೆ.  ಊಟ, ಉಪಚಾರ, ಮಾತು ಕಥೆಗಳಲ್ಲೇ   ದಿನದ   ಪೂರ್ಣತೆ.  ಪಶ್ಚಿಮ, ತನ್ನ ಅತಿಥಿಗಳಿಗಾಗಿ   ತೆರೆದ   ರಾತ್ರಿಯ  ಕದದೊಳಗಿಂದ   ಸುರಿದದ್ದು,  ನಿಶ್ಯಬ್ದ,  ನೀರವ  ವಾತಾವರಣ. ತಂಪಾದ ಗಾಳಿ . ಆದರೆ ಸೊಂಪಾದ  ನಿದ್ದೆಗೆ,   ಮನ  ಇದು  ರಾತ್ರಿ  ಎಂದು   ನಂಬಿಸಿದರೂ  ದೇಹಕ್ಕೆ ಎಲ್ಲಿಯ  ಅರಿವು?  ಕಣ್ಣ  ರೆಪ್ಪೆಗೆ  ಒಂದೊನ್ನೊಂದ   ಅಪ್ಪಿಕೊಳ್ಳಲಾರದ   ಸ್ಥಿತಿ. ಅದರ  ಅಸ್ತಿತ್ವ  ಇನ್ನೂ  ಪೂರ್ವದಲ್ಲೇ. ಅವುಗಳಿಗೆ  ಅಲ್ಲಿಯದನ್ನು  ಬಿಟ್ಟಿರಲಾಗದ   ಇಲ್ಲಿಯದನ್ನು  ಮುಟ್ಟಲಾರದ  ಹೊಯ್ದಾಟ.  ಎಲ್ಲವೂ  ಸುಂದರ, ಸುಖ, ಸೌಲಭ್ಯ, ಶಿಸ್ತು, ಅಚ್ಚುಕಟ್ಟು,ನೀಟು. ಆದರೆ ಮನಕ್ಕೆ   ಅದೆಲ್ಲದರ  ಜೊತೆಯಲ್ಲೂ  ಪೂರ್ವದ್ದೆ  ಹೋಲಿಕೆ . ತನ್ನ ನೆನಪಿನ  ಕೋಶದಲ್ಲಿ  ಭದ್ರವಾಗಿ  ತಳವೂರಿದ  ನೆನಪುಗಳ  ನೆರಳಿನಲ್ಲಿಯೇ  ಅದರ  ಬದುಕು.  ಹಾಗೂ ಅಲ್ಲಿಯದೇ  ಚೆನ್ನವಾ ಎಂಬ ಸಣ್ಣ ಅನುಮಾನ   ಸದಾ  ಅದರ  ಜೊತೆಗೇ.  ಅಲ್ಲಿಯೂ ಇಲ್ಲದ  ಇಲ್ಲಿಯೂ ಸಲ್ಲದ ಭಾವ ಅದೆಷ್ಟೋ  ದಿನದವರೆಗೂ.  ಹೊಸತನ್ನು  ಪಡೆಯುವದರ  ಜೊತೆ ಜೊತೆಗೇ,  ಪೂರ್ವದಲ್ಲಿಯ  ನಡೆದಾಡಿದ ನೆಲ, ಕೇಳಿದ ಮಾತು,  ಓದಿದ   ಪುಸ್ತಕ, ನೋಡಿದ  ದೃಶ್ಯ, ಮಾಡಿದ  ದಿನಚರಿ, ಎಲ್ಲದರ ನೆನಪು,ಮೆಲುಕಾಟ,   ದಿನವೂ ಒಂದಲ್ಲ ಹತ್ತಾರು ಬಾರಿ. ಇದು  ಯಾರದೋ, ಇವರು ಯಾರವರೋ, ಎನ್ನುವ ಮನ, ಇದೂ ನಮ್ಮದು, ಇವರೂ ನಮ್ಮವರು ಅನ್ನಲು ಶುರುವಿಟ್ಟು ಕೊಂಡಿದ್ದು ಎಷ್ಟೋ  ಕಾಲದ  ನಂತರ.

ಮುಚ್ಚಿಕೊಂಡ ಬಾಗಿಲ  ಆಚೆ  ಅದೆಷ್ಟು ಮಾತುಗಳು, ಮುಖಗಳು, ಭಾವಗಳು. ಮನ ತೆರೆದುಕೊಂಡಾಗಲೇ ಅದಕ್ಕೆ  ತುಂಬಿಕೊಳ್ಳುವ ಶಕ್ತಿ. ಬಾಗಿಲ ತೆಗೆದು ಅವುಗಳನ್ನು ಕರೆದು ಮನ ತುಂಬಿಸಿಕೊಂಡಾಗ.   ಅದು  ಆದದ್ದು ಎಷ್ಟು ವಿಸ್ತಾರ. ಭಾಷೆಗಳು ಬೇರೆಯಾದರು  ಮಾತು   ಒಂದೇ, ರೂಪಗಳು  ಬೇರೆಯಾದರು  ಮನಸ್ಸು  ಒಂದೇ, ರೀತಿಗಳು ಬೇರೆಯಾದರು ಭಾವ ಒಂದೇ ಎಂಬ ಅರಿವಿಗೆ,  ಹೊಸ ಜಗತ್ತೇ  ತೆರೆದುಕೊಂಡ ಹರುಷ.  ಆ ಹೊಸ ಜಗತ್ತಿನ ತುಂಬಾ  ಮನೋ  ವಿಹಾರ. ಇಲ್ಲಿ   ಒಂದೊಂದಾಗಿ  ತೆರೆದುಕೊಂಡ  ಪುಟಗಳು  ಎಷ್ಟೋ! ಆ ಪುಟದ ತುಂಬಾ  ಬಿಡಿಸಿದ  ಚಿತ್ರಗಳು, ಅವಕ್ಕೆ  ತುಂಬಿದ ಬಣ್ಣಗಳು,  ಮೂಡಿಸಿದ ಅಕ್ಷರಗಳು, ಅವುಗಳಿಗೆ ಕೊಟ್ಟ ಅರ್ಥಗಳು ಒಂದಲ್ಲ ಹತ್ತಾರು ..... ........

ಈಗ  ದಾರಿಯ ಮುಕ್ತಾಯಕ್ಕೆ  ಬಂದು ನಿಂತು  ಬಿಟ್ಟ ಹೆಜ್ಜೆ. ಕಾಲಕ್ಕೆ ಅದರದ್ದೇ ಆದ  ಮಿತಿ. ನಮಗೆ ನಮ್ಮದೇ ಆದ  ಬಧ್ಧತೆ.  ಇಲ್ಲಿಂದ ಹಿಂದಕ್ಕೆ, ಪೂರ್ವ ಜಗತ್ತಿಗೆ  ಮರಳಲೇ  ಬೇಕು. ಆದರೆ  ಒಂದು  ಖುಶಿ ಎಂದರೆ  ಮರಳುವಾಗ ಜೊತಗೆ, ಒಂದಿಷ್ಟು ಅಮೂಲ್ಯ ಸರಕುಗಳನ್ನಾದರೂ ಒಯ್ಯುತ್ತಿದ್ದೇವಲ್ಲಾ, ಎಂದು. ಎದೆಯ  ಗೂಡೊಳಗೆ ಮತ್ತಷ್ಟು  ಗಟ್ಟಿಯಾಗಿ ಬೆಸೆದ ಚಿಗುರಿನ  ಮಮತೆಯನ್ನ,  ತೆರೆದುಕೊಂಡ  ಹೊಸ ಜಗತ್ತಿನ ಸ್ನೇಹಿತರ   ಬಳಗದ  ಪ್ರೀತಿಯನ್ನ, ಸ್ವರದಿಂದ  ಮುಂದಕ್ಕೆ ಚಲಿಸಿದ  ಆಲಾಪದ ಗುಂಗನ್ನ, ಪುಟಕ್ಕೆ ಇಳಿದ ಮಾತುಗಳಿಗೆ  ಸಾಕ್ಷಿಯಾಗುತ್ತಾ, ಕೊನೆಗೂ  ಪದಗಳ  ರೂಪ  ಕೊಡಲು  ಸೋತ  ಕೆಲವು ಭಾವಗಳನ್ನ.

Monday, January 18, 2010

ಹೇಗೆ ಬಂದು ಹೋಗಿರುವೆ

ನನ್ನೆದೆಯ ಹಾದಿಯಲಿ
ನಿನ್ನ ಹೆಜ್ಜೆ ಮೂಡಿದೆ.
ಯಾವ ಮಾಯದಲ್ಲಿ ನೀನು
ಹೀಗೆ ಬಂದು ಹೋಗಿರುವೆ.

ಪ್ರತಿ ಘಳಿಗೆ ಪ್ರತಿ ಕ್ಷಣವೂ
ಕಣ್ಣoಚಿನಲೇ ನಿನ್ನ ಕಾದು,
ರೆಪ್ಪೆ ಸೋತ ಸಮಯದಲ್ಲಿ
ಹೇಗೆ ಬಂದು ಹೋಗಿರುವೆ.

ನನ್ನೆದೆಯಾ ಬೇಗೆಯ ನೋಡಿ
ಮಳೆಯೆ ಇಳೆಗೆ ಬಂದಿದೆ ಓಡಿ
ಒದ್ದೆ ಕಾಲ ಹೆಜ್ಜೆಯೂ ಮೂಡದೆ
ಹೇಗೆ ಬಂದು ಹೋಗಿರುವೆ.

ಭಾವಗಳ ಕದತೆರೆದು
ನಿನಗಾಗೆ ಕಾಯುತ ಕುಳಿತೆ
ನಿನ್ನುಸಿರ ಸದ್ದೂ ಕೇಳದಹಾಗೆ
ಹೇಗೆ ಬಂದು ಹೋಗಿರುವೆ.

Thursday, January 14, 2010

ಸಂಕ್ರಮಣ

ಕಳೆದು ಹೋದ ನಿನ್ನೆಗಳು ಬಂದು
ನನ್ನೆದೆಯ ಕದ ತಟ್ಟಿದಾಗ ಇನ್ನೂ ಮುಂಜಾವು.
ಕದತೆರೆದು ದೃಷ್ಟಿಹಾಯಿಸಿದುದ್ದಕ್ಕೂ
ಆಗಷ್ಟೆ ಹರಿದ ನಸು ಬೆಳಕಿಗೆ
ಅಂಗಳದ ತುಂಬಾ ಪಾರಿಜಾತ, ಜಾಜಿ, ಸೇವಂತಿಗೆ........
ಒಡಲ ತುಂಬಾ ಹೂವಿನದೇ  ಘಮ.

ಒಂದೊಂದು ಹೂವಿನದೂ ಒಂದೊಂದು ಮಾಟ
ಯಾವ ಮಾಯದಲ್ಲಿ ಇಳೆಗಿಳಿದವೋ ಅವು
ಎದೆಯಾಳದ ವರೆಗೂ ಸವಿಯಾದ ಕಂಪು .
ನೀರ ಹನಿಸಿದ್ದು ನಾನೇ ಎಂಬ ಜಂಭವಿಲ್ಲ
ನೀರ ಸತ್ವ ಹೀರುವ ಶಕ್ತಿ ಹೂವಿಗೆ.

ಎಲ್ಲಿಯ ನೆಲ ಎಲ್ಲಿಯ ಬೀಜ
ಯೋಚಿಸುತ್ತ ಕುಳಿತರೆ ಎಲ್ಲವು ಅಯೋಮಯ
ಇಂದು ಸಕ್ರಾಂತಿ ಹೊಸ ದಿನ ಹೊಸ ಘಳಿಗೆ.
ಸ್ನೇಹಿತರ ಮನೆ ಮನೆಗೆ ಸಿಹಿ ಹಂಚಬೇಕು
ಜೊತೆಗೆ ಹೂವಿನ ಘಮ ಕೂಡಾ

Monday, January 11, 2010

ವ್ಯವಸ್ಥೆ

ಮನೆಗಳು, ಮನೆಗಳು, ಮನೆಗಳು.
ಮಜಬೂತಾದ ಕಿಟಕಿ ಬಾಗಿಲುಗಳು.
ದಪ್ಪ ದಪ್ಪ ಸರಳುಗಳು,
ನಡುವೆ ಸಿಕ್ಕಿ ಹಾಕಿಕೊಂಡಿರುವ
ಸಾವಿರಾರು ತಲೆಬುರುಡೆಗಳು .
ಅವುಗಳ -
ನಡೆ ತಡೆದಿವೆ ಗೋಡೆಗಳು,
ಕೈಗಳ ಬಂಧಿಸಿವೆ ಕತ್ತಲುಗಳು,
ಬಾಯ ಬಿಗಿದಿವೆ ಬೀಗಗಳು,
ನಿಂತಲ್ಲೇ ಒದ್ದಾಟ ಗುದ್ದಾಟಗಳು.
ಅವುಗಳು -
ಹೊರ ಜಿಗಿಯಲು ನಡೆಸಿವೆ ಯುದ್ಧ ,
ಏನೋ ಮುರಿದ ಸದ್ದು,
ಅವು ಕಿಟಕಿ ಬಾಗಿಲುಗಳದೋ
ತಲೆಬುರುಡೆಗಳದೋ
ಅಂತೂ-
ತಪ್ಪಿಸಿಕೊಂಡ ತಲೆಬುರುಡೆಗಳು
ಓಡಿದವು ಕುಂಡಿಗೆ ಕಾಲುಹಚ್ಚಿ,
ದಿಕ್ಕೆಟ್ಟು ಕಂಡ ಕಂಡ ಕಡೆಗೆ,
ಕಾಲ್ತುಳಿತಕ್ಕೆ ಸಿಕ್ಕಿ ನುಜ್ಜು ಗುಜ್ಜಾಗಿ
ಹೋದವೆಷ್ಟೋ  ಉಳಿದವೆಷ್ಟೋ
ಕೊನೆಗೂ -
ಕಿಟಕಿಯ ಸರಳುಗಳು,
ಬಾಗಿಲ ಚೌಕಗಳು,
ಗೋಡೆಗಳು  ಎಲ್ಲಾ  ಸೇರಿ,
ತಲೆಬುರುಡೆಗಳನ್ನೆಲ್ಲಾ   ಎಳೆದೆಳೆದು,
ತಂದು ಪೇರಿಸಿಟ್ಟವು
ಮತ್ತೆ ಮನೆಯೊಳಗೆ.